ADVERTISEMENT

ಮಳೆಗೆ ಕುಸಿದಿದ್ದ ಸೇತುವೆಯಿಂದ ಬಿದ್ದು ಬೈಕ್‌ ಸವಾರರು ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 13:09 IST
Last Updated 4 ಅಕ್ಟೋಬರ್ 2019, 13:09 IST
ರಂಗಸ್ವಾಮಿ
ರಂಗಸ್ವಾಮಿ   

ಕೊಣನೂರು: ರಾಮನಾಥಪುರ ಹೋಬಳಿಯ ಬಸವನಹಳ್ಳಿಯ ಸಮೀಪ, ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಕುಸಿದಿದ್ದ ಸೇತುವೆಯಿಂದ ಬೈಕ್‌ ಕೆಳಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದ ನವಂಜಿಬಾರೆಯ ರಂಗಸ್ವಾಮಿ (25) ಮತ್ತು ಅಂಬೇಡ್ಕರ್ ನಗರದ ನವೀನ್ ಕುಮಾರ್ (24) ಮೃತಪಟ್ಟವರು. ಗುರುವಾರ ಪಿತೃಪಕ್ಷಕ್ಕೆಂದು ಸ್ನೇಹಿತನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.

ಕಳೆದು ತಿಂಗಳು ಸುರಿದ ಭಾರಿ ಮಳೆಗೆ ಬಸವನಹಳ್ಳಿ- ಕೇರಳಾಪುರ ನಡುವಿನ ಸೇತುವೆಯು ಕುಸಿದಿತ್ತು. ಆದ್ದರಿಂದ ಪಕ್ಕದಲ್ಲೇ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ, ಇದರ ಮಾಹಿತಿಯಿಲ್ಲದೇ ಸೇತುವೆ ಮೇಲೆ ಬಂದು ಆಳವಾದ ಕಂದಕಕ್ಕೆ ಬಿದ್ದು ಪ್ರಾಣಕಳೆದುಕೊಂಡಿದ್ದಾರೆ.

ADVERTISEMENT

ಸಂಬಂಧಿಕರ ಆಕ್ರೋಶ: ಸೇತುವೆ ದುರಸ್ತಿ ಮಾಡಿದ್ದರೆ, ಅಥವಾ ಅಡ್ಡಲಾಗಿ ಮಣ್ಣನ್ನು ಸುರಿದಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದರು. ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿರೋಧವೊಡ್ಡಿದರು. ನಂತರ ಪೊಲೀಸರು ಮನವೊಲಿಸಿ ಕೊಣನೂರಿನ ಆಸ್ಪತ್ರೆಗೆ ಸಾಗಿಸಿದರು.

ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಸೇತುವೆ ಬಳಿ ಅಡ್ಡಲಾಗಿ ಮಣ್ಣನ್ನು ಸುರಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಬಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ, ಆಕಸ್ಮಿಕವಾಗಿ ನಡೆದ ದುರ್ಘಟನೆಯಿಂದ ಅತೀವ ನೋವಾಗಿದೆ. ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕೊಣನೂರು ಪೊಲೀಸ್ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.