ಬೆಂಗಳೂರು: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಬಾದಾಮಿಯಲ್ಲಿ ಸಮಸ್ಯೆ ಹೇಳಲು ಬಂದ ಗ್ರಾಮಪಂಚಾಯತ್ ಸದಸ್ಯರೊಬ್ಬರನ್ನು ವೇದಿಕೆಯಿಂದ ಕೆಳಗಿಳಿಸಿರುವುದು ಪಂಚಾಯತ್ ವ್ಯವಸ್ಥೆಗೇ ಮಾಡಿದ ಅಪಮಾನ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾದ ಗ್ರಾಮಪಂಚಾಯತ್ ಸದಸ್ಯ ಸಂಗಣ್ಣ ಜಾಬಣ್ಣ ಅವರು, ‘ಯಾರೂ ಹಳ್ಳಿ ಕಡೆಗೆ ಬಂದಿಲ್ಲ. ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ದರಾಮಯ್ಯ ಬಂದು ಹೋದ್ರೂ ಕಾಮಗಾರಿ ಆಗಿಲ್ಲ’ ಎಂದು ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಆಗ ಸಿದ್ದರಾಮಯ್ಯ ದೂಡಿದರು. ಇದು ಅವರಿಗೆ ವ್ಯಕ್ತಿತ್ವಕ್ಕೆ ತಕ್ಕುದಾದ ನಡತೆಯಲ್ಲ’ ಎಂದು ಕಾರ್ಣಿಕ್ ತಿಳಿಸಿದ್ದಾರೆ.
‘ಈ ಮೂಲಕ ಸಿದ್ದರಾಮಯ್ಯ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ಅವಮಾನಿಸಿದ್ದಾರೆ. ಈ ಅತಿರೇಕದ ವರ್ತನೆಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.