ಬೆಂಗಳೂರು: ಬಿಜೆಪಿಯ ಒಳಜಗಳ ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಗುರುತಿಸಿಕೊಂಡಿರುವ ಬಣವು ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಬಹಿರಂಗ ಹೋರಾಟಕ್ಕೆ ಚಾಲನೆ ನೀಡಿದೆ. ಇನ್ನೊಂದೆಡೆ ವಿಜಯೇಂದ್ರ ವಿರುದ್ಧ ಯತ್ನಾಳ ವಾಗ್ದಾಳಿ ಮುಂದುವರಿಸಿದ್ದಾರೆ.
ವಿಜಯೇಂದ್ರ ಪರ ಗುರುತಿಸಿಕೊಂಡಿರುವ ಎಂ.ಪಿ.ರೇಣುಕಾಚಾರ್ಯ, ಪರಣ್ಣ ಮನವಳ್ಳಿ, ಬಸವರಾಜ್ ದಡೇಸುಗೂರ್, ಗೋಪಾಲ್ ನಾಯಕ್, ಸುನೀಲ್ ಹೆಗಡೆ, ಸುನೀಲ್ ನಾಯಕ್, ಬಸವರಾಜ ನಾಯ್ಕ, ಪಿಳ್ಳ ಮುನಿಸ್ವಾಮಪ್ಪ, ಬೆಳ್ಳಿ ಪ್ರಕಾಶ್, ಮಸಾಲೆ ಜಯರಾಮ್, ಎಂ.ಡಿ.ಲಕ್ಷ್ಮಿನಾರಾಯಣ ಸೇರಿ 20ಕ್ಕೂ ಹೆಚ್ಚು ಮಾಜಿ ಶಾಸಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದರು.
ನಂತರ ಕೋಲಾರದ ಕುರುಡುಮಲೆಗೆ ತೆರಳಿ, ಅಲ್ಲಿಂದ ಹೋರಾಟ ಆರಂಭಿಸಿದರು. ಅಲ್ಲಿ ಬಿ.ಸಿ.ಪಾಟೀಲ, ಜಿ.ಎಂ. ಸಿದ್ದೇಶ್ವರ ಜತೆಯಾದರು. ‘ಯತ್ನಾಳರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಯತ್ನಾಳ, ‘ವಿಜಯೇಂದ್ರ ವಂಶವಾದಿ, ಭ್ರಷ್ಟಾಚಾರಿಯಾಗಿದ್ದು ಅವನನ್ನು ಕಿತ್ತೊಗೆಯಲಿ. ನನ್ನ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡರೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.