ADVERTISEMENT

ಬಿಜೆಪಿಯಿಂದ ಸಚಿವ ಸ್ಥಾನ, ₹ 30 ಕೋಟಿ ಆಮಿಷ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 17:58 IST
Last Updated 28 ಸೆಪ್ಟೆಂಬರ್ 2018, 17:58 IST
   

ಬೆಳಗಾವಿ: ‘ಪಕ್ಷಕ್ಕೆ ಸೇರಿದರೆ ಸಚಿವ ಸ್ಥಾನ ಹಾಗೂ ₹30 ಕೋಟಿ ನೀಡುವುದಾಗಿ ಬಿಜೆಪಿಯ ಮುಖಂಡರೊಬ್ಬರು ನನಗೆ ದೂರವಾಣಿ ಕರೆ ಮಾಡಿ ಆಮಿಷವೊಡ್ಡಿದ್ದರು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೇ 16, 17ರಂದು ನಾನು ಹೈದರಾಬಾದ್‌ನಲ್ಲಿ ಇದ್ದಾಗ ಬಿಜೆಪಿ ಮುಖಂಡರೊಬ್ಬರಿಂದ ದೂರವಾಣಿ ಕರೆ ಬಂದಿತ್ತು. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು’ ಎಂದು ವಿವರಿಸಿದರು.

‘ಈ ಸಂಭಾಷಣೆಯ ಧ್ವನಿಮುದ್ರಣವನ್ನು ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಪಕ್ಷದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರಿಗೆ ಕಳುಹಿಸಿಕೊಟ್ಟಿದ್ದೆ. ಕೇಂದ್ರ ಸಚಿವರೊಬ್ಬರು ನನ್ನ ಸಹೋದರಿಗೂ 3 ಬಾರಿ ದೂರವಾಣಿ ಕರೆ ಮಾಡಿ, ನನ್ನನ್ನು ಬಿಜೆಪಿಗೆ ಕರೆತರುವಂತೆ ಕೇಳಿಕೊಂಡಿದ್ದರು’ ಎಂದರು.

ADVERTISEMENT

ಇದಕ್ಕೂ ಮೊದಲು ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮಿ, ‘ಲೋಕಸಭೆ ಚುನಾವಣೆ ಬರುತ್ತಿರುವ ಕಾರಣ ಬಿಜೆಪಿಯವರುಆಪರೇಷನ್‌ ಕಮಲಕ್ಕೆ ಕೈ ಹಾಕಿದ್ದಾರೆ.ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ’ ಎಂದರು.

ಆಮಿಷವೊಡ್ಡಿದ ಮುಖಂಡರ ಹೆಸರನ್ನು ಬಹಿರಂಗಪಡಿಸುವಂತೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.