ಬೆಂಗಳೂರು: ‘ಕೊರೊನಾ ವೈರಾಣು ಸೋಂಕಿನಿಂದ ಆದ ಸಾವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಣೆ ಆಗಬೇಕಾದರೆ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಯಾರು ಹೊಣೆ’ ಎಂದು ಬಿಜೆಪಿ ರಾಜ್ಯ ಘಟಕವು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದ್ದು, ‘ಕೊರೊನಾ ವೈರಾಣು ಸೋಂಕಿನಿಂದ ಆದ ಸಾವುಗಳಿಗೆ ಮೋದಿ, ಯಡಿಯೂರಪ್ಪ ಹೊಣೆ ಎಂದು ಮೀರ್ ಸಾದಿಕ್ ಬೊಬ್ಬೆ ಹೊಡೆಯುತ್ತಾರೆ. ಕೋವಿಡ್ ಸಾಂಕ್ರಾಮಿಕ ತಡೆಗೆ ಸರ್ಕಾರ ಮಾಡಿದ ಪ್ರಯತ್ನಗಳೇಕೆ ಕಣ್ಣಿಗೆ ಕಾಣುತ್ತಿಲ್ಲ’ ಎಂದು ಕೇಳಲಾಗಿದೆ.
‘ದೇಶದಲ್ಲಿ ಅನೇಕ ಸಾವಿನ ಸರಣಿಗಳು ನಡೆದಿವೆ. ಸಿಖ್ ದಂಗೆಯನ್ನು ನೆನಪಿಸಬೇಕೆ? ಮತಾಂಧ ಸಂಘಟನೆಗಳ ಮೇಲಿನ ಪ್ರಕರಣ ಹಿಂತೆಗೆದುಕೊಂಡು ಅಮಾಯಕ ಹಿಂದೂ ಕಾರ್ಯಕರ್ತರ ಸಾವಿಗೆ ಕಾರಣರಾದ ನಿಮ್ಮನ್ನು ಜನತೆ ಎಂದೂ ಕ್ಷಮಿಸುವುದಿಲ್ಲ’ ಎಂದು ಬಿಜೆಪಿ ಹೇಳಿದೆ.
ಮಹಾತ್ಮ ಗಾಂಧಿಯವರ ಮಗ ಮದ್ಯವ್ಯಸನಿ ಆಗಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಮಹಾತ್ಮ ಗಾಂಧಿ ಅವರನ್ನು ಟೀಕಿಸಿ, ನಕಲಿ ಗಾಂಧಿಗಳನ್ನು ಪೂಜಿಸುವುದೇ ಗಾಂಧಿವಾದವೆ’ ಎಂದು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.