ADVERTISEMENT

ಸರ್ಕಾರ ರಚನೆಗೆ ಬಿಜೆಪಿ ಸಿದ್ಧ: ಡಿವಿಎಸ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:57 IST
Last Updated 3 ಫೆಬ್ರುವರಿ 2019, 19:57 IST

ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸುವುದು ಅನುಮಾನ. ಸರ್ಕಾರ ರಚನೆಗೆ ಬಿಜೆಪಿ ಸಿದ್ಧವಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಷಯದ ಬಗ್ಗೆ ಮಾತನಾಡಿದ ಅವರು, ‘ಇವತ್ತಿನ ಬೆಳವಣಿಗೆ ನೋಡಿದರೆ ನಮ್ಮ ಪಕ್ಷ ಸಹ ರಾಜಕೀಯ ನಿಲುವು ತೆಗೆದುಕೊಳ್ಳುವುದು ಅನಿವಾರ್ಯ. ನಾವು ಜನರ ರಕ್ಷಣೆಗೆ ಬರಬೇಕಾದ ಅಗತ್ಯ ಇದೆ. ಸಮಯ ಸಂದರ್ಭಕ್ಕೆ ತಕ್ಕಂತೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ಹಿಂದೆ ಬೀಳುವುದಿಲ್ಲ’ ಎಂದರು.

ADVERTISEMENT

‘ಮೈತ್ರಿ ಸರ್ಕಾರದ ಕೋಟೆಯ ಒಳಗೆ ಅವರ ಸೈನಿಕರೇ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅದಕ್ಕೆ ನಾವು ಜವಾಬ್ದಾರರು ಅಲ್ಲ. ಅವರ ಶಾಸಕರ ಕಾಣೆ ಆಗಿದ್ದಾರೆ. ಗಲಾಟೆ ಮಾಡಿ ಓಡಿ ಹೋದ ಶಾಸಕನನ್ನು ಹುಡುಕಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಶಾಸಕರು ಕುಮಾರಸ್ವಾಮಿ ಅವರಿಗೆ ಬೆಂಬಲ ಹಿಂಪಡೆದರೆ ನಾವು ಸರ್ಕಾರ ರಚನೆ ಮಾಡತ್ತೇವೆ. ನಮ್ಮ ಎಲ್ಲ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿದರೆ ಮೈತ್ರಿಕೂಟದವರೂ ಜೀವಂತವಾಗಿ ಇದ್ದಾರಲ್ಲ. ನಮ್ಮ ತಂತ್ರಗಳಿಗೆ ಅವರು ಪ್ರತಿತಂತ್ರ ರೂಪಿಸುತ್ತಾರೆ’ ಎಂದು ಅವರು ನಗೆ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.