
ಬೆಂಗಳೂರು: ‘ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ. ಬೆಂಬಲಿಗರೂ ಕೂಡಾ ಮಂಡ್ಯ ಬಿಟ್ಟು ಹೋಗಬಾರದು ಎಂದಿದ್ದಾರೆ. ಅಲ್ಲಿ ಬಿಜೆಪಿಯ ಗೆಲುವಿಗೆ ಪೂರಕ ವಾತಾವರಣವಿದೆ’ ಎಂದು ಸಂಸದೆ ಸುಮಲತಾ ಅಂಬರೀಷ್ ಇಲ್ಲಿ ಹೇಳಿದರು.
ತಮ್ಮ ನಿವಾಸದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲಬಹುದು. ಆದರೆ, ನನ್ನ ಆದ್ಯತೆ ಮಂಡ್ಯ ಕ್ಷೇತ್ರ. ಅಂಬರೀಷ್ ಅವರು 25 ವರ್ಷ ಮಂಡ್ಯದಲ್ಲೇ ರಾಜಕಾರಣ ಮಾಡಿಕೊಂಡು ಬಂದಿದ್ದು, ಹೀಗಾಗಿ ಮಂಡ್ಯ ಕ್ಷೇತ್ರವನ್ನು ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದರು.
‘ಸಾಮಾಜಿಕ ಜಾಲತಾಣದಲ್ಲಿ ಕೆಲವರು ಊಹಾಪೋಹಗಳನ್ನು ಹರಿಬಿಡುತ್ತಿದ್ದಾರೆ. ನಾವು ಎಲ್ಲರೂ ಪರಸ್ಪರ ವಿಶ್ವಾಸದಲ್ಲೇ ಇದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೆ. ಚಿತ್ರ ನಟ ದರ್ಶನ್ ಅವರು ಕೂಡಾ ಜತೆಗೆ ಇರುವುದಾಗಿ ಹೇಳಿದ್ದಾರೆ’ ಎಂದರು.
‘ಪ್ರಧಾನಿ ಮೋದಿ ದೇಶಕ್ಕಾಗಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಎಲ್ಲ ದೇಶಗಳ ನಾಯಕರೂ ಅವರಿಗೆ ಗೌರವ ನೀಡುತ್ತಾರೆ. ವಿಶ್ವಗುರುವಿನ ಸ್ಥಾನದಲ್ಲಿದ್ದಾರೆ. ದೇಶದ ಮುನ್ನಡೆಯ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಸುಮಲತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.