ಬೆಂಗಳೂರು: ‘ಮೂಲ ಕಾಂಗ್ರೆಸಿಗರ ಪಾಲಿಗೆ ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ. ವರ ಕೊಟ್ಟವರ ತಲೆಯ ಮೇಲೆ ಉರಿ ಹಸ್ತ ಇಡಲು ಹೊರಟರೆ ಮೂಲ ಕಾಂಗ್ರೆಸಿಗರು ಬಿಡುತ್ತಾರೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.
ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮೂಲ ಕಾಂಗ್ರೆಸಿಗರು ದೂರು ನೀಡಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮೂಲ ಕಾಂಗ್ರೆಸ್ಸಿಗರಿಗೆ ಅಸ್ತಿತ್ವದ ಭಯ ಕಾಡುತ್ತಿದೆ. ಇದೊಂದು ರೀತಿ ಭಸ್ಮಾಸುರ ಕತೆ ಇದ್ದಂತೆ ಎಂದು ಛೇಡಿಸಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುವಷ್ಟರಲ್ಲೇ ವರಿಷ್ಠರಿಗೆ ದೂರು ಮುಟ್ಟಿದೆ. ಸದಾ ನೆರೆ ಮನೆಯ ದುಃಖಕ್ಕೆ ಅಳುವವರನ್ನು ಯಾರು ಮೆಚ್ಚುತ್ತಾರೆ? ನಿಮ್ಮ ಬುಡು ಕುಸಿಯುವ ಮುನ್ನ ಎಚ್ಚರ ವಹಿಸಿ ಎಂದು ಕಟಕಿಯಾಡಿದೆ.
ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂಬೇಡ್ಕರ್ ಅವರ ಮೇಲೆ ಕಾಂಗ್ರೆಸ್ ದ್ವೇಷ ಸಾಧಿಸಿದ ಇತಿಹಾಸವನ್ನು ಬಿಚ್ಚಿಡಬೇಕೆ? ಶ್ಯಾಮಾ ಪ್ರಸಾದ್ ಮುಖರ್ಜಿ, ಪಿ.ವಿ.ನರಸಿಂಹರಾವ್, ಸೀತಾರಾಂ ಕೇಸರಿ, ದೇವರಾಜ ಅರಸು ವಿಚಾರದಲ್ಲಿ ಕಾಂಗ್ರೆಸ್ ಮಾಡಿದ ದ್ವೇಷದ ರಾಜಕಾರಣವನ್ನು ನೆನಪಿಸಿಕೊಳ್ಳಿ ಎಂದು ಹೇಳಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಜಮೀರ್ ಖಾನ್ ಮಹಾ ಮಂಗಳಾರತಿ ಎತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವ ಭ್ರಷ್ಟ ಡಿ.ಕೆ.ಶಿವಕುಮಾರ್ ಮತ್ತೊಬ್ಬ ಭ್ರಷ್ಟನನ್ನು ಸಮರ್ಥಿಸಿಕೊಂಡಿದ್ದರು. ಈಗ ಅದೇ ವ್ಯಕ್ತಿ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರ ಪಟ್ಟ ಶಿಷ್ಯನನ್ನು ಓಲೈಸಲು ಹೋಗಿ ಮುಖಭಂಗ ಅನುಭವಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.