ADVERTISEMENT

ಜನವರಿ 21 ರಿಂದ 29 ರವರೆಗೆ ರಾಜ್ಯವ್ಯಾಪಿ ಬಿಜೆಪಿ ವಿಜಯಸಂಕಲ್ಪ ಅಭಿಯಾನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 10:48 IST
Last Updated 16 ಜನವರಿ 2023, 10:48 IST
ಜನವರಿ 21 ರಿಂದ 29 ರವರೆಗೆ ರಾಜ್ಯವ್ಯಾಪಿ ಬಿಜೆಪಿ ವಿಜಯಸಂಕಲ್ಪ ಅಭಿಯಾನ
ಜನವರಿ 21 ರಿಂದ 29 ರವರೆಗೆ ರಾಜ್ಯವ್ಯಾಪಿ ಬಿಜೆಪಿ ವಿಜಯಸಂಕಲ್ಪ ಅಭಿಯಾನ   

ಬೆಂಗಳೂರು: ಇದೇ 21 ರಿಂದ 29 ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಆರಂಭಿಸಲಿದ್ದು, 2 ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ 39 ಸಂಘಟನಾ ಜಿಲ್ಲೆಗಳು, 312 ಮಂಡಲಗಳಲ್ಲಿ ಈ ಅಭಿಯಾನ ನಡೆಯಲಿದೆ. ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಭೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದಲ್ಲಿ ಜ.21 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಈ ಅಭಿಯಾನದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂಪರ್ಕಿಸಲಾಗುವುದು. ಸುಮಾರು 2 ಕೋಟಿಗೂ ಹೆಚ್ಚು ಫಲಾನುಭವಿಗಳು ಎಂದರೆ, 1 ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ಗುರಿ ಹಮ್ಮಿಕೊಳ್ಳಲಾಗಿದೆ. ಜನ್‌ಧನ್, ಪಿಎಂ ಕಿಸಾನ್‌, ಪಿಎಂ ಆವಾಸ್‌, ಉಜ್ವಲಾ, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂರ್ಕಿಸುತ್ತೇವೆ ಎಂದರು.

ಅವರ ಮನೆಗಳ ಮೇಲೆ ಪಕ್ಷವನ್ನು ಬೆಂಬಲಿಸುವ ಉದ್ದೇಶದ ಸ್ಟಿಕರ್‌ಗಳನ್ನು ಅಂಟಿಸಲಾಗುವುದು. ಇದಕ್ಕಾಗಿ 3 ಕೋಟಿ ಸ್ಟಿಕ್ಕರ್‌ ಹಂಚಲಾಗುವುದು. ಈ ಕಾರ್ಯಕ್ರಮ ಏಕ ಕಾಲದಲ್ಲಿ 58 ಸಾವಿರ ಬೂತ್‌ಗಳಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಇದೇ 29 ರಂದು ಪ್ರಧಾನಿ ಮೋದಿಯವರ ‘ಮನ್‌ಕಿ ಬಾತ್ ರೇಡಿಯೋ’ ಕಾರ್ಯಕ್ರಮವನ್ನು ಎಲ್ಲ ಬೂತ್‌ಗಳಲ್ಲಿ ಒಟ್ಟಿಗೇ ಕುಳಿತು ಆಲಿಸುವ ಕಾರ್ಯಕ್ರಮವೂ ಇದೆ. ಇದರೊಂದಿಗೆ ಅಭಿಯಾನವನ್ನು ಪೂರ್ಣಗೊಳಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

–––––––––––––

‘ನಾ ನಾಯಕಿಯಲ್ಲ... ನಾಲಾಯಕ್‌’

ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡ ‘ನಾ ನಾಯಕಿ’ ಕಾರ್ಯಕ್ರಮ ‘ನಾಲಾಯಕ್‌’ ಎಂದು ಸಚಿವ ಡಾ. ಅಶ್ವತ್ಥನಾರಾಯಣ ವ್ಯಾಖ್ಯಾನಿಸಿದರು.

ಈ ಕಾರ್ಯಕ್ರಮದಿಂದ ಏನೂ ಪ್ರಯೋಜನ ಆಗುವುದಿಲ್ಲ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾರ್ದಾ ಅವರು ಪ್ರಚಾರಕ್ಕೆ ಹೋದ ಮೇಲೆ ಅಲ್ಲಿ ಕಾಂಗ್ರೆಸ್‌ ಸಿಂಗಲ್‌ ಡಿಜಿಟ್‌ಗೆ ಇಳಿಯಿತು. ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗಿದೆ ಎಂದರು.

ದೇಶದಲ್ಲಿ ಕೋವಿಡ್‌ ತಾರಕಕ್ಕೆ ಏರಿದ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಅಪಪ್ರಚಾರ ಮಾಡಿದವರು ಇದೇ ವ್ಯಕ್ತಿಗಳು. ಭಾರತ್‌ ತೋಡೊ ಎನ್ನುವ ವ್ಯಕ್ತಿಗಳ ಜತೆ ಸೇರಿ ಭಾರತ್‌ ಜೋಡೊ ಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.