ADVERTISEMENT

ತೈಲ ದರ ಏರಿಸಲು ಗುಳ್ಳೆನರಿಯಂತೆ ಕಾದಿದ್ದ ಬಿಜೆಪಿ: ಸಿದ್ದರಾಮಯ್ಯ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2022, 11:33 IST
Last Updated 23 ಮಾರ್ಚ್ 2022, 11:33 IST
   

ಬೆಂಗಳೂರು: ಐದು ರಾಜ್ಯಗಳ ಚುನಾವಣೆ ಮುಗಿಯುವುದನ್ನೇ ಗುಳ್ಳೆನರಿಯಂತೆ ಕಾದು ಕುಳಿತಿದ್ದ ಬಿಜೆಪಿಯು, ಈಗ ಜನ ಸಾಮಾನ್ಯರು ಕಷ್ಟಪಟ್ಟು ದುಡಿದ ದುಡ್ಡನ್ನು ಕಿತ್ತುಕೊಳ್ಳಲು ಮುಗಿಬಿದ್ದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಸಾಮಾನ್ಯರನ್ನು ಕಾಡಲು ತೈಲ ದರ ಏರಿಕೆ ಪುನಃ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಮುಗಿದ ಬಳಿಕ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ದರವನ್ನು ಏರಿಸಲು ತೈಲ ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಅದು ಈಗ ನಿಜವಾಗಿದೆ. ಎಲ್‌ಪಿಜಿ ಒಂದು ಸಿಲಿಂಡರ್‌ಗೆ ₹50 ಏರಿಕೆಯಾಗಿದೆ. ಸೌದೆಯನ್ನು ಉರಿಸುತ್ತಿದ್ದವರ ಮೇಲಿನ ಬಿಜೆಪಿಯ ನಕಲಿ ಕಾಳಜಿಗೆ ಏನಾಯಿತು? ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ತೈಲ ದರ ಏರಿಕೆಯಿಂದ ಆಹಾರ, ದಿನಬಳಕೆ ವಸ್ತುಗಳ ದರವೂ ಏರಿಕೆಯಾಗುತ್ತದೆ. ಅಂತಿಮವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ. ತೈಲ ದರ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎಲ್ಲ ವಿಧದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಕಾರ್ಪೋರೇಟ್‌ ಟ್ಯಾಕ್ಸ್‌ ಕಡಿಮೆ ಮಾಡಿದೆ. ಆದರೆ ಸಾಮಾನ್ಯ ಜನರ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ. ಇದು ನಿಲ್ಲಬೇಕು. ಬಿಜೆಪಿ ಸರ್ಕಾರ ಹೆಚ್ಚು ಗಳಿಕೆಯಿರುವ ವ್ಯಕ್ತಿಗಳ ಮೇಲೆ ಮತ್ತು ಕಾರ್ಪೋರೇಟ್‌ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.