ADVERTISEMENT

ಹಿರಿಯರಿಗೆ ಗೌರವ ಕೊಡದಿರುವುದು ಬಿಜೆಪಿಗೆ ಮುಳುವಾಗುತ್ತೆ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 4:31 IST
Last Updated 16 ಏಪ್ರಿಲ್ 2023, 4:31 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಹುಬ್ಬಳ್ಳಿ: ಕೆಲವರು ತಮ್ಮ ಹಿತಕ್ಕಾಗಿ ಬಿಜೆಪಿಯನ್ನು ಬಲಿ‌ ಕೊಡುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡದೆ ಇರುವುದು ಬಿಜೆಪಿಗೆ ಮುಳುವಾಗುತ್ತೆ ಎಂದು ಶಾಸಕ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಳುವ ಮುನ್ನ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು‌.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರಿಗೆ ಇಲ್ಲಿನ ಬಿಜೆಪಿಯ ತಳಮಟ್ಟದ ಪರಿಸ್ಥಿತಿ ಬಗ್ಗೆ ಏನೂ ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು ಹಾಗೂ ಇಲ್ಲಿನ ನಾಯಕರು ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದು ಹೇಳಿದರು.

ADVERTISEMENT

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದರು.

ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ, ಹಿಂದೆ ಸರಿಯಲ್ಲ. ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲಾ ಆಯ್ಕೆಗಳು ತೆರೆದಿವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಕಾಂಗ್ರೆಸ್ ನವರು ತಮ್ಮ ಪ್ರತಿನಿಧಿ ಕಳಿಸಿದ್ದಾರೆ ಎಂದರು.

ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.