ಬೆಳಗಾವಿ: ‘ಬಿಜೆಪಿಯ ಕೆಲವು ದೊಡ್ಡ ನಾಯಕರು ಅಫೀಮು ಸೇವಿಸದೇ ಮನೆಯಿಂದ ಈಚೆಗೆ ಬರುತ್ತಿರಲೇ ಇಲ್ಲ. ಅದೆಲ್ಲವೂ ನಮಗೆ ಗೊತ್ತಿದೆ. ಆದರೆ, ಅವರ ಹೆಸರು ಹೇಳಲು ಬಯಸುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
‘ಡ್ರಗ್ಸ್ ವಿಚಾರದಲ್ಲಿ ಒಂದು ಧರ್ಮದವರನ್ನು ಗುರಿಯಾಗಿಸುವುದು ತಪ್ಪು. ಕಾನೂನು ಬಾಹಿರವಾದ ಕೆಲಸವನ್ನು ಯಾವುದೇ ಧರ್ಮ ಅಥವಾ ಪಕ್ಷದವರು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಈಗ ಕೇವಲ ಹೆಣ್ಮಕ್ಕಳನ್ನಷ್ಟೆ ದೂರಲಾಗುತ್ತಿದೆ. ಗಂಡಸರ್ಯಾರೂ ಅಫೀಮು, ಗಾಂಜಾ ಪ್ರಕರಣದಲ್ಲಿ ಶಾಮೀಲಾಗಿಲ್ಲವೆ? ಕೋವಿಡ್–19 ನಿರ್ವಹಣೆಯಲ್ಲಿ ಆಗಿರುವ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಾಂಜಾ ವಿಚಾರದಲ್ಲಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಿವೆ’ ಎಂದರು.
‘ಕಾನೂನುಬಾಹಿರ ಚಟುವಟಿಕೆಗಳೇನೇ ನಡೆದರೂ ಅಲ್ಪಸಂಖ್ಯಾತ ನಾಯಕರೇ ಜವಾಬ್ದಾರರು ಎಂದು ಬಿಂಬಿಸುವುದು ಬಿಜೆಪಿಯರಿಗೆ ಫ್ಯಾಷನ್ ಆಗಿಬಿಟ್ಟಿದೆ’ ಎಂದು ಅವರು ಟೀಕಿಸಿದರು.
‘ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದೇ ಆರ್ಎಸ್ಎಸ್, ಬಿಜೆಪಿಯ ಮೂಲ ಉದ್ದೇಶ. ಅದು 1923ರಿಂದಲೂ ನಡೆದುಕೊಂಡು ಬಂದಿದೆ’ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.