ಮೈಸೂರು: ‘ಬಿಜೆಪಿಯವರು ‘ಗ್ರಾಮ ಸ್ವರಾಜ್’ ಎಂಬ ಹೆಸರಿನಲ್ಲಿ ಪ್ರತಿ ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸಿ ಆರ್ಭಟ ಮಾಡುತ್ತಿದ್ದಾರೆ. ಇದು ಯಾವುದೂ ವರ್ಕೌಟ್ ಆಗಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಬುಧವಾರ ಇಲ್ಲಿ ಹೇಳಿದರು.
‘ಗ್ರಾಮ ಪಂಚಾಯಿತಿ ಚುನಾವಣೆಯು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗಿಂತ ಸಂಪೂರ್ಣ ಭಿನ್ನ. ಗ್ರಾಮ ಪಂಚಾಯಿತಿ ಚುನಾವಣೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯಡಿ ನಡೆಯಲ್ಲ. ಒಂದೇ ಪಕ್ಷದ 2–3 ಜನ ನಿಲ್ಲುವ ವಾತಾವರಣವೂ ಇದೆ. ಒಂದೇ ಕುಟಂಬದ ಇಬ್ಬರು ನಿಲ್ಲುವ ಪ್ರಸಂಗವೂ ಇರುತ್ತದೆ’ ಎಂದು ಹೇಳಿದರು.
ಮೋದಿ ದೀಪ ಹಚ್ಚುವುದು ಬೇಡ: ‘ನವದೆಹಲಿಯ ಹೊರವಲಯದಲ್ಲಿ ರೈತರು ಕಳೆದ ಒಂದು ವಾರದಿಂದ ಚಳಿಯನ್ನು ಲೆಕ್ಕಿಸದೆ ಬೀದಿಯಲ್ಲಿ ಮಲಗಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ವಾರಾಣಸಿಯಲ್ಲಿ ದೀಪ ಹಚ್ಚುವ ಕೆಲಸ ಮಾಡಿದ್ದಾರೆ. ಅದರ ಬದಲು ರೈತರ ಕುಟುಂಬಗಳಿಗೆ ಬೆಳಕು ಕೊಡುವ ಕೆಲಸ ಮಾಡಲಿ. ಸಭೆ ಕರೆದು ರೈತರಲ್ಲಿರುವ ಆತಂಕ ದೂರ ಮಾಡಲಿ’ ಎಂದು ಸಲಹೆ ನೀಡಿದರು.
ಜಿ.ಟಿ.ದೇವೇಗೌಡ ಪಕ್ಷ ಬಿಟ್ಟಿಲ್ಲ: ‘ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷ ಬಿಟ್ಟುಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಬಿಜೆಪಿ ನಾಯಕರ ಜತೆ ಓಡಾಡುತ್ತಾರೆ. ಅದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಬೇಕಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.