ವಿಧಾನ ಪರಿಷತ್: ‘ಬಡವರ ಮಕ್ಕಳಿಗೆ ಉಚಿತವಾಗಿ ವಸತಿ ಶಾಲೆಗಳಿಗೆ ಪ್ರವೇಶ ನೀಡುವುದರಿಂದ, ಕುಟುಂಬದ ನಿಗಾದಿಂದ ದೂರಾಗುತ್ತಾರೆ. ಅದು ಒಳ್ಳೆಯದಲ್ಲ’ ಎಂದು ನೀವು ಹೇಳಿಲ್ಲ ಎಂಬುದನ್ನು ಸಾಬೀತುಪಡಿಸಿದರೆ, ನಾನು ರಾಜೀನಾಮೆ ನೀಡುತ್ತೇನೆ. ಹೇಳಿದ್ದರೆ ನೀವು ರಾಜೀನಾಮೆ ನೀಡುತ್ತೀರಾ’ ಎಂದು ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.
ವಿಧಾನ ಪರಿಷತ್ನಲ್ಲಿ ಶ್ರಮಿಕ ವಸತಿಶಾಲೆಗಳ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ, ‘ಏನೇನೋ ಮಾತನಾಡಿ ಹಾದಿ ತಪ್ಪಿಸಬೇಡಿ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಆಗ ಮಧ್ಯಪ್ರವೇಶಿಸಿದ ಹರಿಪ್ರಸಾದ್, ‘ಬಡಮಕ್ಕಳಿಗೆ ಉಚಿತ ಶಾಲೆ ನೀಡಬೇಡಿ ಎನ್ನುತ್ತಿರುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರು ಕಟ್ಟಡ ಕಾರ್ಮಿಕರನ್ನು ಅನಿಷ್ಟ– ಕನಿಷ್ಠ ಎಂದಿದ್ದು ಸರಿಯಲ್ಲ. ಬೆವರು, ರಕ್ತ ಸುರಿಸಿ ಕಟ್ಟಡ ಕಾರ್ಮಿಕರು ಶ್ರಮಿಸುತ್ತಾರೆ’ ಎಂದರು.
‘ಬಡವರ ಮಕ್ಕಳಿಗೆ ಉಚಿತವಾಗಿ ಶಾಲೆ ಬೇಡ ಎಂದು ನಾವ್ಯಾರೂ ಹೇಳಿಲ್ಲ’ ಎಂದು ಬಿಜೆಪಿಯ ಎನ್. ರವಿಕುಮಾರ್, ಭಾರತಿ ಶೆಟ್ಟಿ, ಡಿ.ಎಸ್. ಅರುಣ್,ಕೆ.ಎಸ್. ನವೀನ್ ಅವರು ಹೇಳಿದರು. ‘ಪ್ರತಾಪ್ ಸಿಂಹ ನಾಯಕ್ ಅವರು ಉಚಿತವಾಗಿ ಶಾಲೆಗೆ ಪ್ರವೇಶ ನೀಡಿದರೆ ಕುಟುಂಬದಿಂದ ದೂರಾಗುತ್ತಾರೆ ಎಂದು ಹೇಳಿದರು’ ಎಂದು ಸಚಿವ ಸಂತೋಷ್ ಲಾಡ್ ದೂರಿದರು.
‘ಕಡತ ನೋಡಿ ಪರಿಶೀಲಿಸುತ್ತೇನೆ, ಸುಮ್ಮನಿರಿ’ ಎಂದು ಹೇಳಿದ ಸಭಾಪತಿ ಬಸವರಾಜ ಹೊರಟ್ಟಿ, ವಾಗ್ವಾದಕ್ಕೆ ತೆರೆ ಎಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.