ADVERTISEMENT

ಬೊಮ್ಮಾಯಿ 20 ತಿಂಗಳಲ್ಲಿ ಮೌಲ್ಯಯುತವಾದದ್ದು ಮಾಡಿಲ್ಲ ಎಂಬುದು ಗೊತ್ತಾಗಿದೆ! ಚೇತನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2023, 14:33 IST
Last Updated 28 ಫೆಬ್ರುವರಿ 2023, 14:33 IST
   

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ ಎಂದು ನಟ, ‘ಆ ದಿನಗಳು’ ಸಿನಿಮಾ ಖ್ಯಾತಿಯ ಚೇತನ್‌ ಅಹಿಂಸಾ ಮೂದಲಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಬಿ.ಎಸ್‌ ಯಡಿಯೂರಪ್ಪ ಅವರ ಕೈ ಹಿಡಿದು ಓಡಾಡಿದ್ದರು. ಅಲ್ಲದೇ, ಯಡಿಯೂರಪ್ಪ ಅವರನ್ನು ಹೊಗಳಿದ್ದರು.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಚೇತನ್‌, ಬಸವರಾಜ ಬೊಮ್ಮಾಯಿ ಅವರು ಅಪ್ರಸ್ತುತರೆಂದು ಗೇಲಿ ಮಾಡಿದ್ದಾರೆ.

ADVERTISEMENT

’ಶಿವಮೊಗ್ಗದಲ್ಲಿ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಒಮ್ಮೆಯೂ ಕೂಡ ಪ್ರಸ್ಥಾಪಿಸದೆ ಬಿ.ಎಸ್ ಯಡಿಯೂರಪ್ಪ ಅವರನ್ನು ಪದೇ ಪದೇ ಉಲ್ಲೇಖಿಸಿದರು. ಬಿಜೆಪಿಯ ವರಿಷ್ಠರಿಗೆ ಗೊತ್ತು... ಅಧಿಕಾರವನ್ನು ಉಳಿಸಿಕೊಳ್ಳಲು ಬಿಎಸ್‌ವೈ ಬೆಂಬಲಕ್ಕಿರುವ ಲಿಂಗಾಯತ ಸಮುದಾಯವನ್ನು ಓಲೈಯಿಸಿಕೊಳ್ಳುವುದು ಒಂದೇ ದಾರಿ ಎಂದು. ಬೊಮ್ಮಾಯಿ ಸರ್ಕಾರವು 20 ತಿಂಗಳಲ್ಲಿ ಯಾವುದೇ ಮೌಲ್ಯಯುತವಾದ ಕೊಡುಗೆ ನೀಡಿಲ್ಲ ಎಂಬುದೂ ಅವರಿಗೆ ಗೊತ್ತಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೊಮ್ಮಾಯಿ ಅವರು ಅಪ್ರಸ್ತುತ ಸ್ಥಾನಮಾನದ ಮುಖ್ಯಮಂತ್ರಿ ಎಂದು ಹೇಳಿದ್ದಾರೆ.

ಸಾಮಾಜಿಕ, ರಾಜಕೀಯ, ಚಿತ್ರರಂಗದ ಕುರಿತು ನಿರಂತರವಾಗಿ, ನಿಷ್ಠುರ ಅಭಿಪ್ರಾಯಗಳನ್ನು ನಟ ಚೇತನ್‌ ಅವರು ಹಂಚಿಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಕುರಿತು ಚೇತನ್‌ ಮಾಡಿದ್ದ ಪೋಸ್ಟ್‌ಗಳು ವಿವಾದಕ್ಕೆ ಗುರಿಯಾಗಿದ್ದವು. ಸಿದ್ದರಾಮಯ್ಯ ಅವರನ್ನು ಬ್ರಾಹ್ಮಣ್ಯ ಬಿತ್ತುವ ನಾಯಕ ಎಂದಿದ್ದ ಚೇತನ್‌, ಕುಮಾರಸ್ವಾಮಿ ಅವರ ಕ್ರಾಂತಿಕಾರಿ ಮಾತುಗಳೆಲ್ಲವೂ ಅಸಂಬದ್ಧ ಎಂದಿದ್ದರು. ಜೆಡಿಎಸ್‌ ಒಂದು ಬ್ರಾಹ್ಮಣ್ಯದ ಪಕ್ಷ ಎಂದೂ ಕರೆದಿದ್ದರು. ಬ್ರಾಹ್ಮಣ್ಯದ ವಿರುದ್ಧದ ಅವರ ಹೇಳಿಕೆ, ‘ಕಾಂತಾರ’ ಸಿನಿಮಾದ ಕುರಿತ ಅವರ ಅಭಿಪ್ರಾಯಗಳು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.