ಬೆಂಗಳೂರು: ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಕೊರತೆ ನೀಗಿಸುವ ಹಾಗೂ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದಬಾಷ್ ಲಿಮಿಟೆಡ್ ಸಂಸ್ಥೆಯು ಆಡುಗೋಡಿ ಕ್ಯಾಂಪಸ್ನಲ್ಲಿರುವ ತನ್ನ ಕ್ರೀಡಾ ಸಂಕೀರ್ಣವನ್ನುಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದೆ.
ಕೊರೊನಾ ಎರಡನೇ ಅಲೆ ಉಲ್ಬಣ ಗೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಸಮಸ್ಯೆ ಹಾಗೂ ಚಿಕಿತ್ಸೆಗೆ ಸಮಸ್ಯೆಯಾಗಿರುವುದರಿಂದ ಬಾಷ್ ಸಂಸ್ಥೆಯು ತನ್ನ ಜಾಗವನ್ನುಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ನಿರ್ಧರಿಸಿದ್ದು, ಪರಿವರ್ತಿಸಿರುವಕೋವಿಡ್ ಚಿಕಿತ್ಸಾ ಕೇಂದ್ರವನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ.
ಈ ಕೋವಿಡ್ ಕೇಂದ್ರದಲ್ಲಿ 70 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕಿತ್ಸೆ ನೀಡಲು ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ದಿನದ 24 ಗಂಟೆಯೂ ಸೋಂಕಿತರಿಗೆ ವೈದ್ಯಕೀಯ ಸೇವೆ, ಆಹಾರ, ಹಾಸಿಗೆ ಹಾಗೂ ಇಂಟರ್ನೆಟ್ ವ್ಯವಸ್ಥೆಯೂ ಇರಲಿದೆ. ಈ ಸೇವೆ ಸಾರ್ವಜನಿಕರಿಗೆ ಹಾಗೂ ಬಾಷ್ ಸಿಬ್ಬಂದಿ ಮತ್ತು ಅವರ ಸಂಬಂಧಿಕರಿಗೂ ಲಭ್ಯ ಎಂದು ಸಂಸ್ಥೆ ತಿಳಿಸಿದೆ.
ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಕೆಪಿಸಿಸಿಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ,‘ಬಾಷ್ ಸಂಸ್ಥೆಯು ತನ್ನ ಕ್ರೀಡಾ ಸಂಕೀರ್ಣವನ್ನು ಕೋವಿಡ್ ಕೇಂದ್ರವನ್ನಾಗಿ ಹಸ್ತಾಂತರಿಸಿ, ಸಾಮಾಜಿಕ ಕಳಕಳಿ ಮೆರೆದಿದೆ. ಕೋವಿಡ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ನಾಗರಿಕರು ಈ ಕೇಂದ್ರದಲ್ಲಿರುವ ಸೇವೆ ಪಡೆದುಕೊಳ್ಳಬಹುದು’ ಎಂದರು.
ಬಾಷ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ,‘ಸಂಸ್ಥೆಯ ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಈವರೆಗೆ ನಾಲ್ಕು ಮಿಲಿಯನ್ಗೂ ಹೆಚ್ಚು ಮಾಸ್ಕ್ ವಿತರಿಸಿದ್ದೇವೆ’ ಎಂದರು.
ನಂದಿನಿ ಲೇಔಟ್ನಲ್ಲಿ ಆರೈಕೆ ಕೇಂದ್ರ
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ ವ್ಯಾಪ್ತಿಯ ನಂದಿನಿ ಲೇಔಟ್ನಲ್ಲಿರುವ ಕೆಂಪೇಗೌಡ ಸಮುದಾಯ ಭವನವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ.
ಈ ಕೇಂದ್ರದಲ್ಲಿ 70 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಇವರು ಮೂರು ಪಾಳಿಗಳಲ್ಲಿ ಕೆಲಸ ಮಾಡಲಿದ್ದಾರೆ. ಸೋಂಕಿಗೊಳಗಾದವರ ಪೈಕಿ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲದಿರುವವರನ್ನು ಈ ಕೇಂದ್ರಕ್ಕೆ ದಾಖಲು ಮಾಡಲು ನಿರ್ಧರಿಸಲಾಗಿದೆ. ‘ಈ ಕೇಂದ್ರಕ್ಕೆ ದಾಖಲಾಗುವವರಿಗೆ ಪ್ರತಿನಿತ್ಯ ಹಾಲು, ಮೊಟ್ಟೆ, ಹಣ್ಣು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಶ್ವಾಸಕೋಶ ತಜ್ಞರು ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಉಸಿರಾಟದ ಸಮಸ್ಯೆ ಇದ್ದವರನ್ನು ಬೇರೆ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನೂ ಮಾಡಿದ್ದೇವೆ’ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
‘ಹೋದ ವರ್ಷದಂತೆ ಈ ಬಾರಿಯೂ 1,500 ವೈದ್ಯಕೀಯ ಕಿಟ್ಗಳನ್ನು ತರಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಸದಲ್ಲಿರುವವರಿಗೆ ಇವುಗಳನ್ನು ವಿತರಿಸಲಾಗುತ್ತದೆ. ಅಗತ್ಯವುಳ್ಳವರಿಗೆ ಪೌಷ್ಟಿಕ ಆಹಾರವನ್ನೂ ಪೂರೈಸಲಾಗುತ್ತದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರ ತಂಡವನ್ನು ನಿಯೋಜಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.