ADVERTISEMENT

ಬಾಲಕನಿಗೆ ಬೆತ್ತಲೆ ಪೂಜೆ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 13:28 IST
Last Updated 3 ಅಕ್ಟೋಬರ್ 2022, 13:28 IST
ಗಂಗನಾಳ್ ಗ್ರಾಮದಲ್ಲಿ ಪೊಲೀಸರು
ಗಂಗನಾಳ್ ಗ್ರಾಮದಲ್ಲಿ ಪೊಲೀಸರು   

ಕೊಪ್ಪಳ: ‘ಅಪ್ಪನ ಸಾಲ ತೀರಬೇಕಾದರೆ ನೀನು ಬೆತ್ತಲೆ ಪೂಜೆ ಮಾಡಬೇಕು.’ ಎಂದು ಬಾಲಕನೊಬ್ಬನನ್ನು ನಂಬಿಸಿ ಆತನಿಗೆ ಬೆತ್ತಲೆ ಪೂಜೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತು ಭಾನುವಾರ ರಾತ್ರಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳಾದ ಕೊಪ್ಪಳ ತಾಲ್ಲೂಕಿನ ಹಾಸಗಲ್‌ ಗ್ರಾಮದ ಶರಣಪ್ಪ ತಳವಾರ, ಗಂಗನಾಳ ಗ್ರಾಮದ ವಿರುಪನಗೌಡ ಮತ್ತು ಮೆತಗಲ್‌ ಗ್ರಾಮದ ಶರಣಪ್ಪ ಓಜನಹಳ್ಳಿ ಎಂಬುವವರನ್ನು ಬಂಧಿಸಲಾಗಿದೆ.

’ಘಟನೆ ಕುರಿತು ಪ್ರಕರಣ ದಾಖಲಾದ 24 ಗಂಟೆಗಳಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ತನಿಖೆಯನ್ನು ಗ್ರಾಮೀಣ ವೃತ್ತದ ಸಿಪಿಐಗೆ ವಹಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.