ADVERTISEMENT

ಶಿಶುಮರಣ ತಡೆಗೆ ಎದೆಹಾಲು ಸಹಕಾರಿ: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 21:16 IST
Last Updated 4 ಆಗಸ್ಟ್ 2024, 21:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಮಗು ಜನಿಸಿದ ಒಂದು ಗಂಟೆಯೊಳಗಾಗಿ ಎದೆಹಾಲು ಉಣಿಸಿದಲ್ಲಿ ಶಿಶುಮರಣದ ಪ್ರಮಾಣ
ವನ್ನು ಶೇಕಡ 20ರಷ್ಟು ತಗ್ಗಿಸಬಹುದು’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಲಾಖೆ ಹಮ್ಮಿಕೊಂಡಿರುವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ದೊರೆತಿದ್ದು, ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ‘ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆಹಾಲು ಸಹಕಾರಿ. ಇದರಿಂದ ರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಹೆಚ್ಚಳವಾಗಲಿದೆ. ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕತೆ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ‌. ಮಗುವಿಗೆ ಇದು ಮೊದಲ ಲಸಿಕೆಯಾಗಲಿದೆ. ಮೊದಲ ಮೂರು ದಿನದ ಹಾಲಿನಲ್ಲಿ ಹೆಚ್ಚು ರೋಗ ನಿರೋಧಕಗಳಿರಲಿದ್ದು, ಮಗುವಿನಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ, ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ನೀಡಬೇಕು’ ಎಂದು ಇಲಾಖೆ ಹೇಳಿದೆ.

ADVERTISEMENT

‘ಸ್ತನ್ಯಪಾನದಿಂದ ಶಿಶು ಮರಣ ತಪ್ಪಿಸಲು ಸಾಧ್ಯವಾಗುತ್ತದೆ. ತಾಯಿಯ ಎದೆ ಹಾಲಿನಷ್ಟು ಪೋಷಕಾಂಶಭರಿತ ಆಹಾರ ಭೂಮಿಯ ಮೇಲೆ ಬೇರೆ ಇಲ್ಲ. ಇದನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಮಗುವಿಗೆ ನೀಡುವ ಚುಚ್ಚುಮದ್ದಿಗಿಂತ ಇದು ಹೆಚ್ಚು ಶಕ್ತಿಶಾಲಿ’ ಎಂದು ತಿಳಿಸಿದೆ.

‘ಸ್ತನ್ಯಪಾನ ಮಕ್ಕಳ ಮೇಲೆ ಹೆಚ್ಚಿನ ಸಕಾರಾತ್ಮ ಪರಿಣಾಮ ಬೀರಲಿದ್ದು, ತಾಯಿ ಮತ್ತು ಮಗುವಿನ ಮಧ್ಯದ ಬಾಂಧವ್ಯ ಬಲಗೊಳ್ಳಲು ಸಹಕಾರಿ. ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ತಾಯಂದಿರು ನವಜಾತ ಶಿಶುಗಳಿಗೆ ಸ್ತನ್ಯಪಾನ ಮಾಡಿಸಬೇಕು’ ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.