ಚಿತ್ರದುರ್ಗ: ರೇಷ್ಮೆ ಇಲಾಖೆಯ ಸಹಾಯಧನ ಮಂಜೂರು ಮಾಡಲು ಫಲಾನುಭವಿ ಬಳಿ ₹ 10 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ನಿರ್ದೇಶಕರ ಕಚೇರಿಯ ರೇಷ್ಮೆ ಪ್ರದರ್ಶಕ ಒ.ಶಿವಕುಮಾರ್ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆದಿದ್ದು, ಅವರನ್ನು ಎಸಿಬಿ ಬಂಧಿಸಿದೆ. ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಫಲಾನುಭವಿ ಎನ್.ಜೆ. ಸಂತೋಷ್ಕುಮಾರ್ 2019–20ನೇ ಸಾಲಿನಲ್ಲಿ 2 ಎಕರೆ, 20 ಗುಂಟೆ ಜಮೀನಿನಲ್ಲಿ ರೇಷ್ಮೆ ಮನೆ ನಿರ್ಮಿಸಿಕೊಂಡಿದ್ದಾರೆ. ₹ 3 ಲಕ್ಷ ಸಹಾಯಧನ ಮಂಜೂರಾತಿಗೆ ಶಿವಕುಮಾರ್ ಶೇ 10ರಂತೆ ₹ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಫಲಾನುಭವಿ ನೀಡಿಲ್ಲ.
ರೇಷ್ಮೆ ಬೆಳೆ ಬೆಳೆದು ಮೂರು ವರ್ಷಗಳಾಗಿದ್ದು, ಎರಡನೇ ವರ್ಷದ ಟ್ರಂಚಿಂಗ್ ಮತ್ತು ಮಲ್ಚಿಂಗ್ ಕೂಡ ಪೂರ್ಣಗೊಂಡಿದೆ. ಸಹಾಯಧನ ಬಿಡುಗಡೆಗೊಳಿಸಿ ಎಂದು ಸಂತೋಷ್ಕುಮಾರ್ ಮಾರ್ಚ್ 15ರಂದು ಇಲಾಖೆಗೆ ಭೇಟಿ ನೀಡಿ ಶಿವಕುಮಾರ್ಗೆ ಮನವಿ ಮಾಡಿದರು. ಆಗ ಅವರು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಲಂಚದ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ಬಸವರಾಜ್ ಆರ್.ಮಗದುಮ್, ಪ್ರವೀಣ್ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತು. ತನಿಖೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.