ತುಮಕೂರು: ಜಮೀನು ಹದ್ದು ಬಸ್ತಿಗಾಗಿ ಜಿಲ್ಲಾ ಭೂ ದಾಖಲೆಗಳ ಕಚೇರಿ ಉಪನಿರ್ದೇಶಕ (ಡಿಡಿಎಲ್ಆರ್) ರಾಮಾಂಜನೇಯ ಅವರು ಹಣ ಪಡೆದರೂ ಕೆಲಸ ಮಾಡಿಕೊಟಿಲ್ಲ ಎಂದು ಆರೋಪಿಸಿ ಗುಬ್ಬಿ ತಾಲ್ಲೂಕಿನ ಬೆಲವತ್ತ ಗ್ರಾಮದ ಲತಾ ಎಂಬುವವರು ಶುಕ್ರವಾರ ಕಚೇರಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಡಿಡಿಎಲ್ಆರ್ ಕಚೇರಿಗೆ ಪತಿ ವೆಂಕಟಾಚಲ ಅವರೊಂದಿಗೆ ಲತಾ ಅವರು ಬಂದಾಗ ಅಧಿಕಾರಿ ಇರಲಿಲ್ಲ. ಇದಕ್ಕೆ ಆಕ್ರೋಶಗೊಂಡ ಮಹಿಳೆ ಕಚೇರಿ ಆವರಣದಲ್ಲಿ ಕಣ್ಣೀರು ಹಾಕಿದ್ದರು.
‘ನಮ್ಮ ಹಳ್ಳಿಗೆ ಸಮೀಪದ ನಂದೀಹಳ್ಳಿಯಲ್ಲಿ ದಾವಣಗೆರೆಯ ವೀಣಾ ಎಂಬುವರಿಗೆ ಸೇರಿದ 5 ಎಕರೆ 26 ಗುಂಟೆಯಲ್ಲಿ 2.26 ಎಕರೆ ನಾನು ಖರೀದಿಸಿದೆ. ಇನ್ನೊಬ್ಬರು ಉಳಿದ ಜಮೀನನ್ನು ಖರೀದಿಸಿದ್ದರು. ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳು ಇವೆ. ಹದ್ದು ಬಸ್ತು ಆಗಿರಲಿಲ್ಲ. ಹದ್ದು ಬಸ್ತು ಮಾಡಿಕೊಡಲುಅರ್ಜಿ ಸಲ್ಲಿಸಿದ್ದೆವು ಎಂದರು.
ರಾಮಾಂಜನೇಯ ಅವರಿಗೆ₹ 15 ಸಾವಿರ, ಕಚೇರಿಯ ಸಿಬ್ಬಂದಿ ರಂಗನಾಥ್ ಎಂಬುವರಿಗೆ ₹ 5 ಸಾವಿರ ಹಣ ಕೊಟ್ಟಿದ್ದೆ. ಆದರೂ ಕೆಲಸ ಮಾಡಿಕೊಟ್ಟಿಲ್ಲ ಎಂದು ವೆಂಕಟಾಚಲ ಆರೋಪಿಸಿದರು.
ನಿಯಮ ಬದ್ಧವಾಗಿ ಕೆಲಸ: ‘ನಾನು ಯಾವುದೇ ರೀತಿ ಲಂಚ ಪಡೆದಿಲ್ಲ. ಆರೋಪ ಮಾಡಿರುವವರ ಪಕ್ಕದ ಜಮೀನಿನವರು ಹದ್ದು ಬಸ್ತು ಮಾಡಲು ಡಿಡಿಎಲ್ಆರ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಸಹಾಯಕ ಭೂಮಾಪನ ಇಲಾಖೆ ಅಧಿಕಾರಿಗೆ (ಎಡಿಎಲ್ಆರ್) ಆದೇಶಿಸಿದ್ದೇನೆ. ನಾನು ಕಾನೂನು ಬದ್ಧವಾಗಿ ಕೆಲಸ ಮಾಡಿದ್ದೇನೆ’ ಎಂದು ರಾಮಾಂಜನೇಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.