ADVERTISEMENT

ಪಕ್ಷಕ್ಕೆ ದ್ರೋಹ ಬಗೆದವರು ಅಂಬೇಡ್ಕರ್‌ವಾದಿಗಳಲ್ಲ: ಮಹೇಶ್‌ ವಿರುದ್ಧ ವಾಗ್ದಾಳಿ

ಎನ್‌.ಮಹೇಶ್‌ ವಿರುದ್ಧ ಬಿಎಸ್‌ಪಿ ಮುಖಂಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:47 IST
Last Updated 14 ಸೆಪ್ಟೆಂಬರ್ 2021, 19:47 IST
ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ದಲ್ಲಿ ಮಂಗಳವಾರ ನಡೆದ ಬಿಎಸ್‌ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮೇಯರ್‌ ಪುರುಷೋತ್ತಮ್‌ ಹಾಗೂ ಬೆಂಬಲಿಗರನ್ನು ಪಕ್ಷದ ಬಾವುಟ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್‌ ಸಿದ್ಧಾರ್ಥ ಬರಮಾಡಿಕೊಂಡರು.
ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ದಲ್ಲಿ ಮಂಗಳವಾರ ನಡೆದ ಬಿಎಸ್‌ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮೇಯರ್‌ ಪುರುಷೋತ್ತಮ್‌ ಹಾಗೂ ಬೆಂಬಲಿಗರನ್ನು ಪಕ್ಷದ ಬಾವುಟ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್‌ ಸಿದ್ಧಾರ್ಥ ಬರಮಾಡಿಕೊಂಡರು.   

ಮೈಸೂರು: ‘ಅಂಬೇಡ್ಕರ್‌ ವಾದದಲ್ಲಿ ನಂಬಿಕೆ ಇಟ್ಟವರು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ರಾಜಕೀಯ ನೆಲೆ ನೀಡಿದ ಪಕ್ಷವನ್ನು ಅಧಿಕಾರದಾಸೆಗೆ ತೊರೆದವರನ್ನು ಮತದಾರರು ಕ್ಷಮಿಸುವುದಿಲ್ಲ’ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ್‌ ಸಿದ್ಧಾರ್ಥ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ‘ಅಧಿಕಾರದೆಡೆಗೆ ಬಹುಜನರ ನಡಿಗೆ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ನಂತರವೂ ದಮನಿತರಿಗೆ ರಾಜಕೀಯ ಸ್ವಾತಂತ್ರ್ಯವನ್ನುಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲವಾಗಿಸಿವೆ. ಹಣಬಲದಿಂದ ಮತ ಗಳನ್ನಷ್ಟೇ ಅಲ್ಲ ನಾಯಕರನ್ನೂ ಖರೀದಿ ಸುತ್ತಿವೆ’ ಎಂದರು.

ದಕ್ಷಿಣ ಭಾರತದ ಉಸ್ತುವಾರಿ ರಾಮ್‌ಜಿ ಗೌತಮ್‌ ಮಾತನಾಡಿ, ‘ಬಹುಸಂಖ್ಯಾತ ಸಮಾಜವು ಒಗ್ಗಟ್ಟಾಗಿ ಬಿಎಸ್‌ಪಿಯನ್ನು ಬೆಂಬಲಿಸಿದರೆ ಚರಿತ್ರೆ ನಿರ್ಮಾಣವಾಗಲಿದೆ. ಸಮಾನತೆ ಹಾಗೂ ಬಹುಜನರ ಹಕ್ಕುಗಳಿಗೆ ಹೋರಾಡಿದ ಅಂಬೇಡ್ಕರ್, ಪೆರಿಯಾರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ನಾರಾಯಣ ಗುರು ಅವರ ಸಿದ್ಧಾಂತಗಳಲ್ಲಿ ಪಕ್ಷದ ಕಾರ್ಯಕರ್ತರು ನಂಬಿಕೆ ಇಟ್ಟಿದ್ದಾರೆ. ಅವರನ್ನು ಬಿಜೆಪಿ ಖರೀದಿಸಲು ಆಗುವು ದಿಲ್ಲ’ ಎಂದರು.

ADVERTISEMENT

ಮಾಜಿ ಮೇಯರ್‌ ಪುರುಷೋತ್ತಮ್‌ ಹಾಗೂ ಬೆಂಬಲಿಗರನ್ನು ಬಿಎಸ್‌ಪಿ ಬಾವುಟ ನೀಡಿ ಪಕ್ಷಕ್ಕೆ ಮುಖಂಡರು ಬರಮಾಡಿಕೊಂಡರು. ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಬಿ.ಎಚ್‌.ಚನ್ನಕೇಶವ ಮೂರ್ತಿ ಅವರ ಹೆಸರನ್ನು ಘೋಷಿಸಲಾಯಿತು.

ಪಕ್ಷದ ರಾಜ್ಯ ಉಸ್ತುವಾರಿಗಳಾದ ಸುರೇಂದ್ರ ಸಿಂಗ್‌ ಕಲೋರಿಯಾ, ಮಾರ ಸಂದ್ರ ಮುನಿಯಪ್ಪ, ಎಂ.ಗೋಪಿನಾಥ್‌, ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಅರಕಲವಾಡಿ, ಗಂಗಾಧರ ಬಹುಜನ, ಕಾರ್ಯದರ್ಶಿ ಶಿವ ಮಹದೇವ್‌, ಜಾಕೀರ್‌ ಹುಸೇನ್‌ ಮೈಸೂರು, ಚಾಮರಾಜನಗರದ ವಿವಿಧ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.