ಕೋಲಾರ: ‘ಬಿಜೆಪಿಯವರು ನನಗೂ ಹಣದ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ದರು. ಇಬ್ಬರು ಶಾಸಕರು ಮತ್ತು ಮಾಜಿ ಶಾಸಕರೊಬ್ಬರು ಮನೆಗೆ ಬಂದು ಮುಂಗಡ ₹ 5 ಕೋಟಿ ಕೊಟ್ಟಿದ್ದರು’ ಎಂದು ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ಗಂಭೀರ ಆರೋಪ ಮಾಡಿದರು.
ಭಾನುವಾರ ಮಾತನಾಡಿದ ಅವರು, ‘ಬಿಜೆಪಿಯವರು ಕೊಟ್ಟ ಹಣ 2 ತಿಂಗಳು ನನ್ನ ಮನೆಯಲ್ಲೇ ಇತ್ತು. ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಅದನ್ನು ಹಿಂದಿರುಗಿಸಿದೆ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿರುವ ನನ್ನ ಮನೆಗೆ ಬಿಜೆಪಿಯ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಶಾಸಕರಾದ ಎಸ್.ಆರ್. ವಿಶ್ವನಾಥ್ ಮತ್ತು ಸಿ.ಎನ್.ಅಶ್ವತ್ಥನಾರಾಯಣ ಹಣ ತಂದಿಟ್ಟು ಹೋದರು. ಇನ್ನೂ ₹ 25 ಕೋಟಿ ಕೊಡುತ್ತೇವೆ ಮತ್ತು ಸಚಿವ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದರು. ಅವರನ್ನು ಹಣದ ಸಮೇತ ಹಿಡಿದುಕೊಡಲು ಆಗಲಿಲ್ಲ’ ಎಂದು ವಿವರಿಸಿದರು.
‘ಹಣದ ಸಂಗತಿಯನ್ನು ಕುಮಾರಸ್ವಾಮಿಯವರ ಗಮನಕ್ಕೆ ತಂದಾಗ ಈ ವಿಷಯ ದೊಡ್ಡದು ಮಾಡುವುದು ಬೇಡವೆಂದು ಹೇಳಿದ್ದರು. ಹೀಗಾಗಿ ಸುಮ್ಮನಾದೆ. ಬಿಜೆಪಿಯವರ ಡೀಲ್ಗೆ ಬಗ್ಗುವುದಿಲ್ಲ. ಅಧಿಕಾರದ ಭ್ರಮೆಯಲ್ಲಿರುವ ಅವರು ಶಾಸಕರ ಖರೀದಿಗೆ ನಡೆಸುತ್ತಿರುವ ಪ್ರಯತ್ನಗಳೆಲ್ಲ ವಿಫಲವಾಗಿವೆ’ ಎಂದು ವಾಗ್ದಾಳಿ ನಡೆಸಿದರು.
‘ಆ ನಾಯಕರು ಸಚಿವ ಸ್ಥಾನ ಕೊಡುತ್ತೇವೆಂದು ಹೇಳಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಹಣ ವಾಪಸ್ ಪಡೆಯುವಂತೆ ಸಾಕಷ್ಟು ಬಾರಿ ಹೇಳಿದರೂ ಅವರ್ಯಾರು ಬರಲಿಲ್ಲ. ಕಾನೂನು ಕ್ರಮಕ್ಕೆ ಮುಂದಾಗುವಾಗಷ್ಟರಲ್ಲಿ ಯೋಗೀಶ್ವರ್ ಹಣ ಹಿಂಪಡೆದರು. ಬಿಜೆಪಿಗೆ ಹೋಗುವ ಆಸೆ ಇದ್ದಿದ್ದರೆ ₹ 25 ಕೋಟಿ ಪಡೆಯುತ್ತಿದ್ದೆ. ಆದರೆ, ಅಂತಹ ಕೆಲಸಕ್ಕೆ ಮುಂದಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.