ADVERTISEMENT

79ನೇ ವರ್ಷಕ್ಕೆ ಕಾಲಿಟ್ಟ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 21:11 IST
Last Updated 27 ಫೆಬ್ರುವರಿ 2021, 21:11 IST
ಯಡಿಯೂರಪ್ಪ ಅವರಿಗೆ ಕುಟುಂಬ ಸದಸ್ಯರು ಆರತಿ ಬೆಳಗಿದರು
ಯಡಿಯೂರಪ್ಪ ಅವರಿಗೆ ಕುಟುಂಬ ಸದಸ್ಯರು ಆರತಿ ಬೆಳಗಿದರು   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶನಿವಾರ ಹುಟ್ಟುಹಬ್ಬ ಸಂಭ್ರಮ. 79ನೇ ವಸಂತಕ್ಕೆ ಕಾಲಿಟ್ಟ ಬಿಎಸ್‌ವೈಗೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ರಾಜಕೀಯ ನಾಯಕರು, ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ರಾಷ್ಟ್ರಪತಿ, ಪ್ರಧಾನಿ ಮೋದಿ, ದೇವೇಗೌಡರು ಕರೆ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಅಲ್ಲದೆ, ಇತರ ಹಲವು ಗಣ್ಯರೂ ಶುಭ ಹಾರೈಸಿದ್ದಾರೆ. ಎಲ್ಲರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಇದೇ 8ರಂದು ಉತ್ತಮ ಬಜೆಟ್ ಮಂಡಿಸುತ್ತೇನೆ’ ಎಂದು ಭರವಸೆ ನೀಡಿದರು. ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಯಡಿಯೂರಪ್ಪ ಅವರನ್ನು ಖುದ್ದು ಭೇಟಿಯಾಗಿ ಶುಭ ಕೋರಿದರು.

‘ಯಡಿಯೂರಪ್ಪ ಒಬ್ಬ ಅನುಭವಿ ನಾಯಕರಾಗಿದ್ದು, ತಮ್ಮ ಜೀವನವನ್ನು ರೈತರು ಹಾಗೂ ಬಡವರ ಹಿತರಕ್ಷಣೆಗೆ ಮುಡಿಪಾಗಿಸಿದ್ದಾರೆ. ಅವರ ಸುದೀರ್ಘ ಆರೋಗ್ಯ ಜೀವನಕ್ಕೆ ಹಾರೈಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರದ ಹಲವು ಸಚಿವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಹುತೇಕ ಎಲ್ಲ ಸಚಿವರು, ಮುಖಂಡರು ಕೂಡಾ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.