ADVERTISEMENT

ಬಸ್‌ ಪ್ರಯಾಣ ದರ ಏರಿಕೆ ಪ್ರಸ್ತಾವ; ಸಿ.ಎಂ ಗರಂ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST
   

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಇಳಿಕೆ ಘೋಷಣೆ ಮಾಡಿದ ಬಳಿಕವೂ ಬಸ್‌ ಪ್ರಯಾಣ ದರ ಏರಿಸುವ ಆದೇಶ ಹೊರಡಿಸಲು ಕಾರಣರಾದ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿನ ಪ್ರಯಾಣ ದರವನ್ನು ಶೇ 18ರಷ್ಟು ಏರಿಕೆ ಮಾಡಲು ಅನುಮತಿ ನೀಡಿರುವುದಾಗಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಆಧರಿಸಿ, ಸೋಮವಾರ ಮಧ್ಯರಾತ್ರಿಯಿಂದಲೇ ದರ ಏರಿಕೆ ಅನ್ವಯವಾಗಲಿದೆ ಎಂದೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿತ್ತು.

ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸಿ ಪ್ರತಿ ಲೀಟರ್ ಮೇಲೆ ₹2 ಇಳಿಕೆ ಮಾಡಲಾಗುವುದು ಎಂದು ಮಧ್ಯಾಹ್ನವಷ್ಟೇ ಮುಖ್ಯಮಂತ್ರಿ ಕಲಬುರ್ಗಿಯಲ್ಲಿ ಘೋಷಿಸಿದ್ದರು. ಆರ್ಥಿಕ ಇಲಾಖೆ ಈ ಸಂಬಂಧ ಆದೇಶವನ್ನೂ ಹೊರಡಿಸಿತ್ತು. ಡೀಸೆಲ್ ದರ ಇಳಿಕೆಯಾಗುವುದರಿಂದ ಸಾರಿಗೆ ನಿಗಮಗಳಿಗೆ ಹೊರೆ ಕಡಿಮೆಯಾಗಲಿದೆ ಎಂಬುದನ್ನು ಲೆಕ್ಕಿಸದ ನಿಗಮದ ಅಧಿಕಾರಿಗಳು, ದರ ಏರಿಕೆ ಪ್ರಕಟಣೆ ಹೊರಡಿಸಿದ್ದರು.

ADVERTISEMENT

ಈ ವಿಷಯ ಗೊತ್ತಾಗಿದ್ದೇ ತಡ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾ ಮಂಡಲರಾದರು. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಕರಿಗೆ ಕರೆ ಮಾಡಿದ ಮುಖ್ಯಮಂತ್ರಿ, ಇಬ್ಬರು ಅಧಿಕಾರಿಗಳಿಗೆ ಚಳಿ ಬಿಡಿಸಿದರು. ‘ಬೊಕ್ಕಸಕ್ಕೆ ನಷ್ಟವಾದರೂ ಪರವಾಗಿಲ್ಲ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾವು ಆಲೋಚಿಸುತ್ತಿದ್ದರೆ, ದರ ಹೆಚ್ಚಿಸುವ ಮೂಲಕ ಸರ್ಕಾರಕ್ಕೆ ಇರುಸುಮುರುಸು ಉಂಟು ಮಾಡುವ ಕೆಲಸಕ್ಕೆ ಕೈಹಾಕಿದ್ದೀರಾ? ಡೀಸೆಲ್ ದರ ಇಳಿಕೆ ಮಾಡುವುದರಿಂದ ನಿಗಮಗಳಿಗೆ ಹೊರೆ ಕಡಿಮೆಯಾಗುವುದಿಲ್ಲವೇ? ಇಷ್ಟು ತಿಳಿವಳಿಕೆ ಇಲ್ಲದೇಆಡಳಿತ ನಡೆಸಿದರೆ ಹೇಗೆ’ ಎಂದು ಕಟುವಾಗಿ ಪ್ರಶ್ನಿಸಿದ್ದಾಗಿ ಮೂಲಗಳು ತಿಳಿಸಿವೆ.

ಆಗಿದ್ದೇನು?: ಬಸ್ ಪ್ರಯಾಣ ದರವನ್ನು ಶೇ 18ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಎಲ್ಲ ನಿಗಮಗಳು ಸಲ್ಲಿಸಿದ್ದವು. ಒಂದು ತಿಂಗಳಿನಿಂದ ಈ ಕಡತಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಡೀಸೆಲ್ ದರ ಏರಿಕೆಯಾಗುತ್ತಲೇ ಇರುವಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಿಸುವ ಕಡತಕ್ಕೆ ಕಳೆದ ವಾರ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದರು. ಆ ಹೊತ್ತಿನಲ್ಲಿ ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡುವ ಆಲೋಚನೆ ಸರ್ಕಾರದ ಮುಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.