ADVERTISEMENT

‘ಮಹಿಮೆ ಕುಗ್ರಾಮಕ್ಕೆ ಶೀಘ್ರ ವ್ಯವಸ್ಥೆ’-ಎಸ್‌.ಸುರೇಶ್‌ಕುಮಾರ್‌

ಪರಿಷತ್‌ನಲ್ಲಿ ಪ್ರತಿಧ್ವನಿಸಿದ ‘ಪ್ರಜಾವಾಣಿ’ ವರದಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:51 IST
Last Updated 15 ಮಾರ್ಚ್ 2021, 19:51 IST
ಮಹಿಮೆಗೆ ಬಸ್‌ ಸಂಚಾರ
ಮಹಿಮೆಗೆ ಬಸ್‌ ಸಂಚಾರ   

ಬೆಂಗಳೂರು: ‘ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿಯ ಮಹಿಮೆ ಎಂಬ ಕುಗ್ರಾಮಕ್ಕೆ ನಾನು ಭೇಟಿ ನೀಡಿದ್ದೇನೆ. ಶಾಲೆಗೆ ಬರಲು ಅಲ್ಲಿನ ವಿದ್ಯಾರ್ಥಿಗಳು ಪಡುತ್ತಿರುವ ಪಾಡು ನೋಡಿದ್ದೇನೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆಗೂ ಚರ್ಚಿಸಿದ್ದು, ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ‘ಪ್ರಜಾವಾಣಿ’ಯ ಮಾರ್ಚ್ 13ರ ಸಂಚಿಕೆಯಲ್ಲಿ ‘ಬಸ್ಸಿಗಾಗಿ 8 ಕಿ.ಮೀ ನಡೆವ ವಿದ್ಯಾರ್ಥಿಗಳು!’ ಶೀರ್ಷಿಕೆಯಡಿ ಮಹಿಮೆ ಗ್ರಾಮದ ಬಗ್ಗೆ ಪ್ರಕಟವಾದ ವಿಶೇಷ ವರದಿಯನ್ನು ಬಿಜೆಪಿಯ ತುಳಸಿ ಮುನಿರಾಜು ಗೌಡ ಪ್ರಸ್ತಾಪಿಸಿದರು. ಮಹಿಮೆ ಕುಗ್ರಾಮವಾಗಿದ್ದು, ಬಸ್‌ ಸಂಚಾರ ಇಲ್ಲದಿರುವುದರಿಂದ ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿರುವ ಬಗ್ಗೆ ಗಮನಸೆಳೆದರು.

ಅದಕ್ಕೆ ಉತ್ತರಿಸಿದ ಸುರೇಶ್‌ಕುಮಾರ್‌, ‘ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದೆಂಬ ಬಗ್ಗೆ ಈಗಾಗಲೇ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು. ಈ ಸಂದರ್ಭದಲ್ಲಿ ಸದನದಲ್ಲಿ ಸಚಿವ ಲಕ್ಷ್ಮಣ ಸವದಿ ಕೂಡಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.