ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ, ಅಧಿಕಾರಿಗಳು ಮತ್ತು ವೈದ್ಯಕೀಯ ಸಮೂಹ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಸಮೂಹ ಮಾಧ್ಯಮಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ಸ್ಥೈರ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.
‘ಸಂದಿಗ್ದತೆಯ ಸಮಯದಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ವರದಿಗಳಿಂದಾಗಿ ಸೋಂಕಿತರೆಂದು ಕಂಡು ಬಂದ ತಕ್ಷಣ ಅವಶ್ಯವಿಲ್ಲದಿದ್ದರೂ ಭಯದಿಂದ ಆಸ್ಪತ್ರೆಗಳಿಗೆ ದೌಡಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮ ಹಾಸಿಗೆಗಳ ಕೊರತೆ ಆಗಿದೆ. ತುರ್ತು ಚಿಕಿತ್ಸೆಯ ಅನಿವಾರ್ಯ ಇರುವವರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಹೇಳಿದ್ದಾರೆ.
ಕೋವಿಡ್ ನಿಯಂತ್ರಣದಲ್ಲಿ ಮಾಧ್ಯಮಗಳ ಪಾತ್ರವೂ ದೊಡ್ಡದು. ರೋಗದಿಂದ ಗುಣಮುಖರಾಗುವವರ ಬಗ್ಗೆಯೂ ಆದ್ಯತೆ ನೀಡಬೇಕು. ಅವರ ಅನುಭವಗಳನ್ನು ಸಾರ್ವಜನಿಕರ ಜತೆಗೆ ಹಂಚಿಕೊಂಡರೆ, ಜನರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯವಾಗುತ್ತದೆ. ಜನರನ್ನು ಜಾಗೃತಗೊಳಿಸಲು ತಜ್ಞರ ಸಲಹೆ, ಮಾರ್ಗದರ್ಶನಗಳನ್ನು ನಿರಂತರ ತಲುಪುವಂತೆ ಮಾಡಲು ಹೆಚ್ಚಿನ ಸಮಯ ಮೀಸಲಿಟ್ಟರೆ ಜನರಲ್ಲಿ ಭರವಸೆ ಮೂಡುತ್ತದೆ ಎಂದು ಹೇಳಿದ್ದಾರೆ.
‘ಸರ್ಕಾರ ಮತ್ತು ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಪತ್ತೆಮಾಡಿ ತೋರಿಸುವುದು ಸರಿ. ಇದರ ಜತೆಗೆ ಪರಿಹಾರಾತ್ಮಕ ಸಲಹೆಗಳೂ ಹರಿದು ಬರಲಿ. ನಾವೆಲ್ಲರೂ ಸಮಸ್ಯೆ ಎದುರಿಸಲು, ಸಂಕಷ್ಟ ದೂರ ಮಾಡಲು ಸಂಘಟನಾತ್ಮಕವಾಗಿ ಹೋರಾಡಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.