ಬೆಂಗಳೂರು: ‘ರಡಾರ್ ಪ್ರಾಜೆಕ್ಟ್ಗಳನ್ನು ನೀಡದೇ ಕಿರುಕುಳ ನೀಡುತ್ತಿರುವ ಹಿರಿಯ ವಿಜ್ಞಾನಿಗಳು, ನನಗೆ ಶೌಚಾಲಯ ಸ್ವಚ್ಛಗೊಳಿಸುವ ಹಾಗೂ ದೂಳು ಹೊಡೆಯುವ ಕೆಲಸದ ಉಸ್ತುವಾರಿ ನೀಡಿದ್ದಾರೆ’ ಎಂದು ಆರೋಪಿಸಿ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯ (ಎಲ್ಆರ್ಡಿಇ) ವಿಜ್ಞಾನಿ ಎಸ್.ಪಿ. ನಾಗೇಶ್ ಅವರು ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಸಂಸ್ಥೆಯಲ್ಲಿ ತಮಗಾಗುತ್ತಿರುವ ಕಿರುಕುಳ ಸಂಬಂಧ ನಾಗೇಶ್ ಅವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರಿಂದಾಗಿ ಇದೀಗ ಠಾಣೆಗೆ ದೂರು ಕೊಟ್ಟಿದ್ದಾರೆ. ಅಕ್ರಮ ಬಂಧನ (ಐಪಿಸಿ 341), ಹಲ್ಲೆ (ಐಪಿಸಿ 323), ಅಪರಾಧ ಸಂಚು (ಐಪಿಸಿ 34) ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಸಂಸ್ಥೆಯ ಇಬ್ಬರು ಹಿರಿಯ ವಿಜ್ಞಾನಿಗಳ ವಿರುದ್ಧಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಹಾಗೂ ಹಿರಿಯ ವಿಜ್ಞಾನಿಗಳ ನಡುವೆ ಏನಾಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ವಿಚಾರಣೆ ನಡೆಸಿದ ನಂತರವೇ ಸತ್ಯಾಂಶ ತಿಳಿಯಲಿದೆ’ ಎಂದರು.
ದೂರಿನ ವಿವರ: ‘1993ರಿಂದ ‘ಎಲ್ಆರ್ಡಿಇ’ಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಜಾತಿ ನಿಂದನೆ ಮಾಡಿರುವ ಹಿರಿಯ ವಿಜ್ಞಾನಿ, ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ನಾಗೇಶ್ ದೂರಿನಲ್ಲಿ ಹೇಳಿದ್ದಾರೆ.
‘ವಾರ್ಷಿಕ ಕರ್ತವ್ಯ ನಿರ್ವಹಣೆ ವರದಿಯನ್ನೂ ತಮ್ಮಿಷ್ಟದಂತೆ ಬರೆದುಕೊಂಡುವಂತೆ ಹಿರಿಯ ವಿಜ್ಞಾನಿ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಕೈಗಳಿಂದ ಹೊಡೆದಿದ್ದಾರೆ. ನಾನು ಕೆಲಸ ಮಾಡುವ ಕೊಠಡಿಯಲ್ಲಿರುವ ಕಾಳಿ ವಿಗ್ರಹವನ್ನೂ ತೆಗೆದು ಹಾಕಿದ್ದಾರೆ’ ಎಂದು ನಾಗೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.