ಬೆಂಗಳೂರು: ‘ಮೇಕೆದಾಟು ಯೋಜನೆಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು ರಾಜ್ಯ ಸರ್ಕಾರ ಇನ್ನು ಸಮರೋಪಾದಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು’ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ಎಸ್.ರಾಜಾರಾವ್ ಒತ್ತಾಯಿಸಿದರು.
ಕರ್ನಾಟಕ ಹಿರಿಯ ಎಂಜಿನಿಯರ್ಗಳ ವೇದಿಕೆಯ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ವಿದ್ಯುತ್ ಉತ್ಪಾದನೆಗೆ ಮತ್ತು ಕೊನೆಯ ಹಂತದ ಜಲಾಶಯವಾಗಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ’ ಕುರಿತು ಉಪನ್ಯಾಸ ನೀಡಿದರು.
ಉಪನ್ಯಾಸದಲ್ಲಿ ಉಲ್ಲೇಖಿಸಿದ ಪ್ರಮುಖ ವಿಷಯಗಳು: ಯೋಜನೆಗೆ ಸುಪ್ರೀಂ ಕೋರ್ಟ್ನಿಂದ ತಡೆ ಇಲ್ಲ. ತಮಿಳುನಾಡಿನ ವಾದದಲ್ಲಿ ಯಾವ ಅರ್ಥವೂ ಇಲ್ಲ. ಇಲ್ಲಿ ಕರ್ನಾಟಕ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಹುದು. ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ರಾಷ್ಟ್ರೀಯ ಜಲ ಆಯೋಗವೂ ಅನುಮತಿ ನೀಡಿದೆ. ವನ್ಯಜೀವಿ, ಅರಣ್ಯ, ಪರಿಸರ ಇಲಾಖೆಯ ಅನುಮತಿಯೂ ಇದಕ್ಕೆ ಅಗತ್ಯ. ಯೋಜನೆಯ ಅಗತ್ಯವನ್ನು ಪುಷ್ಟೀಕರಿಸುವ ವರದಿಯನ್ನು ಜಲ ಆಯೋಗದ ಮುಂದೆ ಮಂಡಿಸಬೇಕು.
ಇನ್ನು ಬೇಕಾಗುವ ಅನುಮತಿಗಳು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಮ್ಮತಿ, ಕೇಂದ್ರ ವಿದ್ಯುತ್ ಪ್ರಾಧಿಕಾರದ ಅನುಮತಿ ಮತ್ತು ಕೇಂದ್ರ ಜಲ ಆಯೋಗದಿಂದ ನಿರಾಕ್ಷೇಪಣಾ ಪತ್ರ ಇರಬೇಕು.
ರಾಜ್ಯ ಸರ್ಕಾರಕ್ಕೇನು ಸಲಹೆ?: ಕೇಂದ್ರ ಜಲ ಆಯೋಗ ಮತ್ತು ಪರಿಸರ ಇಲಾಖೆಗಳು ನೀಡಿದ ಮಾರ್ಗಸೂಚಿಗಳ ಪ್ರಕಾರ ವಿಸ್ತೃತ ಯೋಜನಾ ವರದಿಯನ್ನು ಸಮರೋಪಾದಿಯಲ್ಲಿ ಸಿದ್ಧಪಡಿಸಬೇಕು. ಪರಿಸರ ಮೇಲಾಗುವ ಪರಿಣಾಮಗಳ ಮೌಲ್ಯಮಾಪನದ ವರದಿಯನ್ನೂ ಸಿದ್ಪಡಿಸಬೇಕು. ಈ ವರದಿಯ ಆಧಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರಲ್ಲೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಬೇಕು.
ಯೋಜನೆ ತ್ವರಿತಗೊಳಿಸುವ ಬಗೆ ಹೇಗೆ?: ಈ ಯೋಜನೆ ಸಲುವಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಬೇಕು. ಈ ಸಕಿತಿ ಯೋಜನೆ ಅನುಷ್ಠಾನದ ಪ್ರಗತಿಯನ್ನುಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಬೇಕು ಎಂದರು.
* ಮೇಕೆದಾಟು ಯೋಜನೆ 4 ವರ್ಷದೊಳಗೆ ಮುಗಿಯಲೇಬೇಕು. ನಿರಂತರ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈ ಯೋಜನೆ ಅಗತ್ಯ
- ಕ್ಯಾಪ್ಟನ್ ಎಸ್.ರಾಜಾರಾವ್, ನೀರಾವರಿ ತಜ್ಞ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.