ಶಿವರಾಜ ತಂಗಡಗಿ
ಬೆಂಗಳೂರು: ‘ರಾಜ್ಯದಲ್ಲಿ ಇದೇ 22ರಿಂದ ಅ. 7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾವ ಅಪಸ್ವರವೂ ಇಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸಮೀಕ್ಷೆಗೆ ಸಿದ್ಧತೆಗಳು ನಡೆದಿವೆ. ಇದು ಸವಾಲಿನ ಕೆಲಸ. ಯಾವುದೇ ಸವಾಲಿನ ಕೆಲಸಕ್ಕೆ ಕೈ ಹಾಕಿದರೆ ಸಣ್ಣ- ಪುಟ್ಟ ಲೋಪಗಳು ಸಹಜ. ಅಕ್ಟೋಬರ್ನಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, ಡಿಸೆಂಬರ್ನಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.
‘ಕೆಲವು ಗೊಂದಲಗಳ ಬಗ್ಗೆ ಆಯೋಗಕ್ಕೆ ಸಲಹೆ ನೀಡಿದ್ದೇವೆ. ಆಯೋಗವು ಸಾಂವಿಧಾನಿಕ ಸಂಸ್ಥೆ ಆಗಿರುವುದರಿಂದ ನಿರ್ದೇಶನ ನೀಡಲು ಸಾಧ್ಯವಿಲ್ಲ. ಸಲಹೆ ನೀಡಬಹುದು’ ಎಂದರು.
ಬಿಜೆಪಿಗರಿಗೆ ಜಾತಿ-ಧರ್ಮ ಕಂಡರೆ ಪ್ರೀತಿ: ‘ಯಾರಾದರು ಸಲಹೆ ನೀಡಿದರೆ, ಏನಾದರೂ ಹೇಳಿದರೆ ಮುಖ್ಯಮಂತ್ರಿ ಕೇಳುವ ಮನಸ್ಥಿತಿ ಹೊಂದಿದ್ದಾರೆ. ಬಿಜೆಪಿಗರಿಗೆ, ಬಿಜೆಪಿ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡಲು ಸಾಧ್ಯವೇ? ಮೋದಿಯವರು ಅವರ ಕೈಗೆ ಸಿಗುತ್ತಾರೆಯೇ? ಬಿಜೆಪಿಯವರು ಸುಮ್ಮನೆ ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ. ಅವರಿಗೆ ಜಾತಿ, ಮಸೀದಿ ಕಂಡರೆ ಪ್ರೀತಿ. ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ’ ಎಂದರು.
‘ಎಲ್ಲ ಸಮುದಾಯಗಳ ನಾಯಕರು ಹಾಗೂ ಸ್ವಾಮೀಜಿಗಳು ಸಭೆ ನಡೆಸುತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ಸಮೀಕ್ಷೆಗೆ ಸಂಬಂಧಿಸಿದಂತೆ ಆಯಾ ಸಮುದಾಯದವರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಾವು ಕೂಡ ಸಮೀಕ್ಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ಸಮೀಕ್ಷೆ ಬಗ್ಗೆ ಘೋಷಣೆ ಮಾಡಿದ್ದೆವು. ಕಷ್ಟದಲ್ಲಿರುವ ಬಡವರಿಗೆ ಸರ್ಕಾರದ ಸವಲತ್ತು ನೀಡುವುದಾಗಿ ಹೇಳಿದ್ದೆವು. ಈ ಕಾರಣಕ್ಕೆ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ–ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.