ADVERTISEMENT

ಚಾಮರಾಜನಗರ ದುರಂತ: ಸಚಿವ ಸುಧಾಕರ್ ಮೇಲೆ ಬಿಎಸ್‌ವೈ ಗರಂ

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:07 IST
Last Updated 4 ಮೇ 2021, 4:07 IST
 ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಚಾಮರಾಜನಗರ ದುರಂತದ ಬಗ್ಗೆ ಮಾಹಿತಿ ಇಲ್ಲದೇ ತಮ್ಮ ಬಳಿಗೆ ಬಂದ ಆರೋಗ್ಯ ಸಚಿವ ಡಾ.ಸುಧಾಕರ್‌ ವಿರುದ್ಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗರಂ ಆದ ಘಟನೆ ಸೋಮವಾರ ಬೆಳಿಗ್ಗೆ ನಡೆಯಿತು.

ದುರಂತದ ಮಾಹಿತಿ ಸಿಗುತ್ತಿದ್ದಂತೆ ಯಡಿಯೂರಪ್ಪ ಚಾಮರಾಜನಗರ ಜಿಲ್ಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದರು. ಆ ಬಳಿಕ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಸುಧಾಕರ್‌ ಬಳಿ, ‘ಚಾಮರಾಜನಗರದ ಮಾಹಿತಿ ಏನಿದೆ, ಅಂಕಿ–ಅಂಶ ಕೊಡಿ’ ಎಂದು ಕೇಳಿದರು.

ಮಾಹಿತಿ ಇಲ್ಲದೇ ಬಂದಿದ್ದ ಸುಧಾಕರ್‌ ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಯಡಿಯೂರಪ್ಪ, ‘ಮಾಹಿತಿ ಇಲ್ಲದೇ ಇಲ್ಲಿಗೆ ಬರುವ ಅಗತ್ಯ ಏನಿತ್ತು? ಮೊದಲು ಚಾಮರಾಜನಗಕ್ಕೆ ಹೋಗಿ’ ಎಂದು ಸಿಡಿಮಿಡಿಗೊಂಡರು ಎಂದು ಮೂಲಗಳು ತಿಳಿಸಿವೆ.

‘ಚಾಮರಾಜನಗರದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಅಗತ್ಯವಿತ್ತು. ಎಷ್ಟು ಲಭ್ಯವಿದೆ, ಕೊರತೆ ಆಗಲು ಕಾರಣವೇನು ಎಂಬುದರ ಅಂಕಿ–ಅಂಶಗಳನ್ನು ಕೊಡಿ ಎಂದು ಯಡಿಯೂರಪ್ಪ ಕೇಳಿದರು. ದಕ್ಷತೆಯ ಜತೆಗೆ ಸರಿಯಾದ ಮತ್ತು ತಾಜಾ ಮಾಹಿತಿಯನ್ನೂ ಇಟ್ಟುಕೊಂಡಿರಬೇಕು. ಎಲ್ಲ ಜಿಲ್ಲೆಗಳ ಮೇಲೂ ನಿಗಾ ಇಟ್ಟು, ಇತಿಮಿತಿಯಲ್ಲಿ ಆಮ್ಲಜನಕ ಪೂರೈಕೆ ಮಾಡಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ADVERTISEMENT

ಇದಕ್ಕೆ ಮೊದಲೇ ಯಡಿಯೂರಪ್ಪ ಅವರು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರಿಂದ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದರು. ಅಲ್ಲದೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಸಹಕಾರ ನೀಡಿದರು ಎಂಬ ಕಾರಣಕ್ಕೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.