ADVERTISEMENT

ಚಾಮರಾಜನಗರ: ಆಯೋಗದ ವರದಿ ಪಡೆದು ಪರಿಹಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 18:57 IST
Last Updated 10 ಜೂನ್ 2021, 18:57 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ವಿಚಾರಣಾ ಆಯೋಗದ ವರದಿ ಪಡೆದು ಮುಂದುವರಿಯಲಾಗುವುದು’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

‘ರಾಜ್ಯ ಸರ್ಕಾರ ನೇಮಿಸಿದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರ ಏಕಸದಸ್ಯ ಆಯೋಗ ವಿಚಾರಣೆ ನಡೆಸುತ್ತಿದೆ. ಸತ್ಯಾಂಶ ಹೊರಬಿದ್ದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ತಿಳಿಸಿದರು.

‘ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ನೀಡಿದ್ದ ವರದಿಯಲ್ಲಿ ಕೆಲ ಲೋಪಗಳಿವೆ. ಆದರೂ, ಪೀಠದ ಅಭಿಪ್ರಾಯ ಮತ್ತು ಮಾನವೀಯ ನೆಲೆಯಲ್ಲಿ ₹2 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿತು’ ಎಂದು ಅವರು ಪ್ರತಿಪಾದಿಸಿದರು.

ADVERTISEMENT

‘ಸಮಿತಿಯ ತನಿಖೆ ಬಗ್ಗೆ ಆಕ್ಷೇಪ ಇದ್ದರೆ ತಿಳಿಸಬಹುದು’ ಎಂದು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ತಿಳಿಸಿತು. ಸರ್ಕಾರ ರಚಿಸಿರುವ ವಿಚಾರಣಾ ಆಯೋಗದ ವರದಿ ಬಂದ ಬಳಿಕವೇ ಪೀಠದ ಮುಂದೆ ರಾಜ್ಯದ ಸರ್ಕಾರದ ನಿಲುವನ್ನು ತಿಳಿಸುವುದಾಗಿ ಅಡ್ವೋಕೇಟ್ ಜನರಲ್ ಹೇಳಿದರು.

ಪೀಠವು ಈ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.