ಬೆಂಗಳೂರು: ಉಪಮುಖ್ಯಮಂತ್ರಿಗಳು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಪಾಲಿಸಬೇಕಿದ್ದ ಶಿಷ್ಟಾಚಾರಗಳನ್ನು ಮಾರ್ಪಾಟು ಮಾಡಿದ್ದು, ಮುಖ್ಯಮಂತ್ರಿಗೆ ಸರಿಸಮಾನವಾಗಿದ್ದ ಕೆಲವು ಶಿಷ್ಟಾಚಾರಗಳನ್ನು ಕೈಬಿಡಲಾಗಿದೆ.
ಜಿಲ್ಲಾ ಕೇಂದ್ರಗಳು ಹಾಗೂ ಇತರೆಡೆಯ ಪ್ರವಾಸದ ಸಮಯದಲ್ಲಿ ಮುಖ್ಯಮಂತ್ರಿಯವರಿಗೆ ಪಾಲನೆ ಮಾಡುತ್ತಿದ್ದ ಶಿಷ್ಟಾಚಾರವನ್ನೇಉಪಮುಖ್ಯಮಂತ್ರಿಗಳಿಗೂ ಪಾಲಿಸಬೇಕಿತ್ತು. ಅದರಲ್ಲಿ ಕೆಲವು ಮಾರ್ಪಾಟು ಮಾಡಿ, ಸರಳಗೊಳಿಸಲಾಗಿದೆ.
ಮುಖ್ಯಮಂತ್ರಿ ಪ್ರವಾಸದ ಸಮಯದಲ್ಲಿ ಜಿಲ್ಲಾ ಕೇಂದ್ರದ ಗಡಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವಾಗತ ಕೋರಿ, ಪೊಲೀಸರಿಂದ ಗೌರವ ರಕ್ಷೆ ನೀಡಲಾಗುತ್ತದೆ. ಇದೇ ರೀತಿಯ ಶಿಷ್ಟಾಚಾರವನ್ನು ಉಪಮುಖ್ಯಮಂತ್ರಿಗಳಿಗೂ ಪಾಲನೆ ಮಾಡಬೇಕಿತ್ತು. ಆದರೆ ಈಗಿನ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ಇದ್ದು, ಆಗಾಗ ಪ್ರವಾಸ ಹೋಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ಪ್ರತಿ ಸಲವೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸ್ವಾಗತ ಕೋರುವುದು ಕಷ್ಟ. ಹಾಗಾಗಿ ಜಿಲ್ಲಾ ಗಡಿಗೆ ಹೋಗಿ ಸ್ವಾಗತ ಕೋರುವುದರಿಂದ ವಿನಾಯಿತಿ ನೀಡಲಾಗಿದೆ.
ಆದರೆ ಉಪಮುಖ್ಯಮಂತ್ರಿ ಹೊಂದಿರುವ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ವಾಗತ ಕೋರಿ, ಬೀಳ್ಕೊಡುವ ಮೂಲಕ ಶಿಷ್ಟಾಚಾರ ಪಾಲನೆಗೆ ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.