ADVERTISEMENT

ಗೂಳಿಹಟ್ಟಿ ಶೇಖರ್‌ಗೆ ₹ 100 ದಂಡ ವಿಧಿಸಿದ ಜನಪ್ರತಿನಿಧಿಗಳ ಕೋರ್ಟ್

3 ತಾಸು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:10 IST
Last Updated 15 ಮಾರ್ಚ್ 2019, 19:10 IST
   

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಜನಪ್ರತಿನಿಧಿಗಳ ಕೋರ್ಟ್ 3 ತಾಸುಗಳಿಗೂ ಹೆಚ್ಚು ಕಾಲ ಪೊಲೀಸರ ವಶಕ್ಕೆ ಒಪ್ಪಿಸಿ ನಂತರ ₹ 100 ದಂಡ ವಿಧಿಸಿ ಬಿಡುಗಡೆ ಮಾಡಿದೆ.

‘ಇನ್ನೊಮ್ಮೆ‌ ಹೀಗೆ ವಿಚಾರಣೆಗೆ ತಪ್ಪಿಸಿಕೊಂಡರೆ ಒಳಗೆ ಕಳಿಸಿಬಿಡ್ತೇನೆ’ ಎಂದು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ, ಶೇಖರ್ ಅವರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಗೈರು ಹಾಜರಾಗಿದ್ದ ಕಾರಣ ಶೇಖರ್ ವಿರುದ್ಧ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಲಯ’ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ADVERTISEMENT

ಶುಕ್ರವಾರ ಬೆಳಗ್ಗೆ ವಾರಂಟ್ ರಿಕಾಲ್ ಮಾಡಿಸಲು ಕೋರ್ಟ್‌ಗೆ ಹಾಜರಾಗಿದ್ದ ಶೇಖರ್ ಅವರನ್ನು ನ್ಯಾಯಾಧೀಶರು ತಕ್ಷಣವೇ ಪೊಲೀಸರ ವಶಕ್ಕೆ ಒಪ್ಪಿಸಿ ಮಧ್ಯಾಹ್ನದ ನಂತರ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.

‘ಗೂಳಿಹಟ್ಟಿ ಶೇಖರ್‌ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಜನತಾ ಕೋ ಆಪರೇಟಿವ್ ಸೊಸೈಟಿಯಿಂದ ₹ 1.25 ಕೋಟಿ ಮೊತ್ತವನ್ನು ಸಾಲ ಪಡೆದಿದ್ದಕ್ಕೆ ನೀಡಿದ್ದ ಚೆಕ್ ಬೌನ್ಸ್ ಆಗಿದೆ‘ ಎಂದು ಸೊಸೈಟಿ ದಾಖಲಿಸಿರುವ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.