ಬೆಂಗಳೂರು: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷದ ನಾಯಕರಾಗಿ ನೀವೆಷ್ಟು ಮಾತನಾಡಿದರೂ ನಮ್ಮ ಆಕ್ಷೇಪ ಇಲ್ಲ. ಅದಕ್ಕೆ ಸಿದ್ದರಾಮಯ್ಯ ಅವರ ಭಾವನೆಗಳನ್ನೂ ಸೇರಿಸಿ ಮಾತನಾಡಬೇಡಿ’.
ಹೀಗೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಬೆಲೆ ಏರಿಕೆ ಕುರಿತು ಸಿದ್ದರಾಮಯ್ಯ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ನಿಯಮ 69ರಡಿ ಪರಿವರ್ತಿಸಿ ಬುಧವಾರ ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ‘ಎಲ್ಲರೂ ಸಾಧ್ಯವಾದಷ್ಟು ಕಡಿಮೆ ಮಾತನಾಡಿ. ಬುಧವಾರವೇ ಸರ್ಕಾರದಿಂದ ಉತ್ತರ ಕೊಡಿಸುವೆ’ ಎಂದು ಕಾಗೇರಿ ಹೇಳಿದರು.
‘ಇದೊಂದು ಜ್ವಲಂತ ಸಮಸ್ಯೆ. ಇದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಬೇಕಿದೆ. ವಿರೋಧ ಪಕ್ಷದ ನಾಯಕರ ಮಾತಿಗೂ ಕಾಲಮಿತಿ ನಿಗದಿ ಮಾಡುವುದು ಸರಿಯಲ್ಲ’ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.
‘ನೀವು ವಿಷಯ ಮಂಡಿಸುವು
ದಕ್ಕೆ ಆಕ್ಷೇಪ ಇಲ್ಲ. ನೀವು ಹೆಚ್ಚು ಮಾತನಾಡಿದರೆ ಉಳಿದ ಸದಸ್ಯರಿಗೆ ಅವಕಾಶ ಹೆಚ್ಚು ಸಿಗುವುದಿಲ್ಲ ಎಂದೆ ಅಷ್ಟೇ’ ಎಂದು ಕಾಗೇರಿ ಸ್ಪಷ್ಟಪಡಿಸಿದರು. ಆಗ ಬಸವರಾಜ ಬೊಮ್ಮಾಯಿ, ‘ಸಿದ್ದರಾಮಯ್ಯನಾಗಿ ಜಾಸ್ತಿ ಮಾತನಾಡುವುದು ಬೇಡ ಎಂಬುದು ನಮ್ಮೆಲ್ಲರ ಬಯಕೆ’ ಎಂದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.