ಮೈಸೂರು: ಈಗಾಗಲೇ 735 ಪ್ರದರ್ಶನಗಳನ್ನು ಕಂಡಿರುವ ‘ಮುಖ್ಯಮಂತ್ರಿ’ ನಾಟಕವನ್ನು ಗಿನ್ನಿಸ್ ದಾಖಲೆಗೆ ಸೇರಿಸಲು, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಿದ್ಧತೆ ನಡೆಸಿವೆ.
‘ಏಪ್ರಿಲ್ 18ರಂದು ಸಂಜೆ 6.30ಕ್ಕೆ ಇಲ್ಲಿನ ಕಲಾಮಂದಿರದಲ್ಲಿ 736ನೇ ಪ್ರದರ್ಶನ ನಡೆಯಲಿದೆ. 41 ವರ್ಷಗಳ ಕಾಲ, ಒಬ್ಬರೇ ಒಂದು ಪಾತ್ರವನ್ನು ನಿರ್ವಹಿಸಿದ ಹವ್ಯಾಸಿ ಕಲಾವಿದರು ಇಲ್ಲ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಇದೊಂದು ಬಗೆಯ ದಾಖಲೆ ಎನಿಸಿದೆ. ಹೀಗಾಗಿ, ಈ ಪ್ರದರ್ಶನದ ನಂತರ ಎಲ್ಲ ದಾಖಲಾತಿಗಳನ್ನು ಗಿನ್ನಿಸ್ ಸಂಸ್ಥೆಗೆ ಸಲ್ಲಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ನಾಟಕದ ಪ್ರಮುಖ ಪಾತ್ರಧಾರಿ ‘ಮುಖ್ಯಮಂತ್ರಿ’ ಚಂದ್ರು ಹಾಗೂ ನಿರ್ದೇಶಕ ಬಿ.ವಿ.ರಾಜಾರಾಂ ಅವರನ್ನು ಶಾಸಕ ಎಚ್.ಪಿ.ಮಂಜುನಾಥ್ ಅಭಿನಂದಿಸಲಿದ್ದಾರೆ. ಪ್ರೊ.ಕೃಷ್ಣೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದು, ‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹಾಗೂ ಇತರರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.