ADVERTISEMENT

ಚಿತ್ರದುರ್ಗ, ಕುಶಾಲನಗರ,ಬನ್ನೂರು | ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ: ದಿನಾಂಕ ನಿಗದಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:33 IST
Last Updated 9 ಆಗಸ್ಟ್ 2024, 15:33 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ಚಿತ್ರದುರ್ಗ ನಗರಸಭೆ, ಕುಶಾಲನಗರ ಮತ್ತು ಬನ್ನೂರು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ADVERTISEMENT

ಈ ಸಂಬಂಧ ಚಿತ್ರದುರ್ಗದ ಸಯ್ಯದ್‌ ನಸ್ರುಲ್ಲಾ ಸೇರಿದಂತೆ 13 ಜನ, ಬನ್ನೂರಿನ ಎಸ್.ಭಾಗ್ಯ ಸೇರಿದಂತೆ 15 ಹಾಗೂ ಕುಶಾಲನಗರದ ಬಿ.ಜಯವರ್ಧನ ಸೇರಿದಂತೆ 16 ಚುನಾಯಿತ ಪ್ರತಿನಿಧಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇದೇ 26ರಂದು ಚುನಾವಣೆ ನಡೆಸಲಾಗುತ್ತದೆ. ಅಂತೆಯೇ, ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಮೈಸೂರು ಜಿಲ್ಲೆಯ ಬನ್ನೂರು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಕ್ರಮವಾಗಿ ಆಗಸ್ಟ್ 19 ಮತ್ತು ಸೆಪ್ಟೆಂಬರ್ 6ರಂದು ಚುನಾವಣೆ ನಡೆಸಲಾಗುತ್ತದೆ’ ಎಂಬ ಮಾಹಿತಿ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಅರ್ಜಿದಾರರ ಮನವಿ ಈಡೇರಿದ್ದು ಈ ಕುರಿತು ಹೆಚ್ಚಿನ ವಿಚಾರಣೆಗೆ ಅಗತ್ಯ ಇಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿತು. ಅರ್ಜಿದಾರರ ಪರ ವಕೀಲ ಎ.ಮೊಹಮ್ಮದ್‌ ತಾಹೀರ್‌ ಮತ್ತು ವರುಣ್‌ ಜೆ.ಪಾಟೀಲ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.