ADVERTISEMENT

ಚಿತ್ರದುರ್ಗ: ಮುರುಘಾ ಶರಣರಿಂದ ಅಧಿಕಾರ ಹಸ್ತಾಂತರ– ಪೀಠತ್ಯಾಗ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 13:12 IST
Last Updated 15 ಅಕ್ಟೋಬರ್ 2022, 13:12 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಮುರುಘಾ ಮಠದ ಅಧೀನದಲ್ಲಿರುವ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು (ಪವರ್ ಆಫ್ ಅಟಾರ್ನಿ) ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರು ನಿವೃತ್ತ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಅವರಿಗೆ ಹಸ್ತಾಂತರಿಸಿದ್ದಾರೆ.

ಹೈಕೋರ್ಟ್‌ ಅನುಮತಿ ಪಡೆದು ಅಧಿಕಾರ ಪತ್ರ ಹಸ್ತಾಂತರ ಪ್ರಕ್ರಿಯೆಯನ್ನು ಕಾರಾಗೃಹದಲ್ಲಿ ಪೂರ್ಣಗೊಳಿಸಲಾಗಿದೆ. ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ನಿರ್ಧಾರ, ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ವಸ್ತ್ರಮಠ ಕಾನೂನಾತ್ಮಕವಾಗಿ ಪಡೆದಿದ್ದಾರೆ.

‘ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ನೀಡಬೇಕು ಎಂಬ ನಿಯಮ ಇದೆ. ಈ ಪ್ರಕ್ರಿಯೆಯನ್ನು ಹೈಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಪೂರ್ಣಗೊಳಿಸಲಾಗಿದೆ. ಕಾರಾಗೃಹದಲ್ಲಿ ನ್ಯಾಯಬದ್ಧವಾಗಿ ಪ್ರಕ್ರಿಯೆ ನಡೆದಿದೆ’ ಎಂದು ಎಸ್‌.ಬಿ.ವಸ್ತ್ರಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಶಿವಮೂರ್ತಿ ಮುರುಘಾ ಶರಣರು ವಿದ್ಯಾಪೀಠದ ಅಧ್ಯಕ್ಷರಾಗಿದ್ದಾರೆ. ಅಧಿಕಾರ ಅವರಲ್ಲಿದ್ದ ಕಾರಣಕ್ಕೆ ವೇತನ ಹಾಗೂ ಇತರ ಆಡಳಿತಾತ್ಮಕ ವಿಚಾರಕ್ಕೆ ತೊಂದರೆ ಉಂಟಾಗಿತ್ತು. ಅವರೇ ಸ್ವ ಇಚ್ಛೆಯಿಂದ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಇನ್ನು ಮುಂದೆ ಆಡಳಿತ ಸುಲಲಿತವಾಗಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರಿಂದ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವೇತನಕ್ಕೆ ತೊಂದರೆ ಉಂಟಾಗಿತ್ತು. ನೌಕರರ ವೇತನದ ಉದ್ದೇಶಕ್ಕೆ ಕಾರಾಗೃಹದಲ್ಲಿ ಚೆಕ್‌ಗಳಿಗೆ ಸಹಿ ಹಾಕಲು ಒಮ್ಮೆ ಮಾತ್ರ ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಪರ್ಯಾಯ ಮತ್ತು ತಾತ್ಕಾಲಿಕ ವ್ಯವಸ್ಥೆ ರೂಪಿಸಿಕೊಳ್ಳಲು ‘ಪವರ್ ಆಫ್ ಅಟಾರ್ನಿ’ ಚಲಾಯಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು.

‘ಪೀಠತ್ಯಾಗದ ಪ್ರಶ್ನೆಯೇ ಇಲ್ಲ’

ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಚಿನ್ಮುಲಾದ್ರಿ ಶ್ರೀಜಗದ್ಗುರು ಮುರುಘರಾಜೇಂದ್ರ ಟ್ರಸ್ಟ್‌ಗೆ ಅವರೇ ಅಧ್ಯಕ್ಷರಾಗಿದ್ದು, ಪೀಠಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಎಸ್‌.ಬಿ.ವಸ್ತ್ರಮಠ ಸ್ಪಷ್ಟನೆ ನೀಡಿದ್ದಾರೆ.

‘ಮಠ ಹಾಗೂ ವಿದ್ಯಾಪೀಠ ಎರಡೂ ಪ್ರತ್ಯೇಕವಾಗಿವೆ. ವಿದ್ಯಾಪೀಠದ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ಅಧಿಕಾರವನ್ನು ಮಾತ್ರ ಹಸ್ತಾಂತರಿಸಲಾಗಿದೆ. ಮಠದ ವಿಚಾರದಲ್ಲಿ ಹಬ್ಬಿರುವ ವದಂತಿಗಳಿಗೆ ಭಕ್ತರು ಕಿವಿಗೊಡುವ ಅಗತ್ಯವಿಲ್ಲ. ಪೀಠಾಧ್ಯಕ್ಷರಾಗಿ ಶರಣರೇ ಮುಂದುವರಿಯಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.