ADVERTISEMENT

ಜ.18ರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ, ಆಲಿಡಾ ಗೆವಾರ ಭಾಗಿ: ವರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 19:31 IST
Last Updated 11 ಜನವರಿ 2023, 19:31 IST
ವರಲಕ್ಷ್ಮಿ
ವರಲಕ್ಷ್ಮಿ   

ಬೆಂಗಳೂರು: ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಸಂಘಟನೆಯ 17ನೇ ಅಖಿಲ ಭಾರತ ಸಮ್ಮೇಳನವು ಜ. 18ರಿಂದ 22ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.

‘ಕೇಂದ್ರ ಸರ್ಕಾರ ಕಾರ್ಪೊರೇಟ್‌ ಧಣಿಗಳ ತುಷ್ಟೀಕರಣಕ್ಕಾಗಿ ಕಾರ್ಮಿಕರಿಗೆ ಸಂಬಂಧಿಸಿದ 29 ಕಾಯ್ದೆಗಳಿಗೆ ತಿದ್ದುಪಡಿ ಮಾಡಿದೆ. ಈ ಮೂಲಕ ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕಾರ್ಮಿಕರಿಗಿದ್ದ ಹಕ್ಕುಗಳನ್ನು ಕಸಿದುಕೊಂಡಿರುವ ಕುರಿತು ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯೂಬಾ ಕ್ರಾಂತಿಯ ನಾಯಕ ಚೆಗೆವಾರ ಮಗಳು ಆಲಿಡಾ ಗೆವಾರ, ವರ್ಲ್ಡ್‌ ಫೆಡರೇಷನ್ ಆಫ್‌ ಟ್ರೇಡ್‌ ಯೂನಿಯನ್ಸ್‌ನ ಪ್ರಧಾನ ಕಾರ್ಯದರ್ಶಿ ಪಂಬಿಸ್‌ ಕೆಯ್ರಿತಿಸಿಸ್‌ ಭಾಗವಹಿಸಲಿದ್ದಾರೆ. ಜ. 22 ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಮಿಕರ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೃಷಿ ವಿರೋಧಿ ನೀತಿಗಳು, ಡಾಲರ್‌ ಎದುರು ರೂಪಾಯಿ ಅಪಮೌಲ್ಯಗೊಂಡು ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ. ಆದರೆ, ಜನಪ್ರತಿನಿಧಿಗಳು ರಸ್ತೆ, ಚರಂಡಿ ಅಭಿವೃದ್ಧಿಯ ವಿಚಾರ ಬಿಡಿ, ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂದು ಕರೆ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಜ. 21ರಂದು ಆಧುನಿಕ ತಯಾರಿಕಾ ವಲಯದ ಕಾರ್ಮಿಕರನ್ನು ಸಂಘಟಿಸುವ ಮಹತ್ವ ಮತ್ತು ಸವಾಲು, ವಲಸೆ ಕಾರ್ಮಿಕರ ಪರಿಸ್ಥಿತಿ ಮತ್ತು ಸಂಘಟನೆಯ ಸವಾಲು, ಬದಲಾಗುತ್ತಿರುವ ಉದ್ಯೋಗದ ಸ್ವರೂಪಗಳು, ಕಾರ್ಮಿಕ ವರ್ಗದ ಐಕ್ಯತೆ ಮತ್ತು ಕೋಮುವಾದದ ಅಪಾಯಗಳು ಕುರಿತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.