ADVERTISEMENT

ಹರಜಾತ್ರೆ: 2ಡಿ ಮೀಸಲಿಗೆ ಕಾಣದ ಸ್ವಾಗತ, ವಿರೋಧ

ಸಾಮಾಜಿಕ ನ್ಯಾಯ ಕೊಟ್ಟೇ ಕೊಡುತ್ತೇವೆ: ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:59 IST
Last Updated 14 ಜನವರಿ 2023, 19:59 IST
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಆಯೋಜಿಸಿರುವ ಹರಜಾತ್ರಾ ಮಹೋತ್ಸವ– 2023 ಹಾಗೂ ರೈತರತ್ನ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಬೆಳಗಿಸಿ ಉದ್ಘಾಟಿಸಿದರು. ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ, ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಆಯೋಜಿಸಿರುವ ಹರಜಾತ್ರಾ ಮಹೋತ್ಸವ– 2023 ಹಾಗೂ ರೈತರತ್ನ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಬೆಳಗಿಸಿ ಉದ್ಘಾಟಿಸಿದರು. ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ, ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 2ಡಿ ಮೀಸಲಾತಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶನಿವಾರ ಆರಂಭಗೊಂಡ ಹರಜಾತ್ರೆಯಲ್ಲಿ ದೊಡ್ಡ ಮಟ್ಟದ ಪರ ಹಾಗೂ ವಿರೋಧದ ಧ್ವನಿ ಕೇಳಿ ಬರಲಿಲ್ಲ.

2ಎ ಮೀಸಲಾತಿ ಪಡೆಯಲು ಇದು ಮೆಟ್ಟಿಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ನಾಯಕರು ಪ್ರತಿಪಾದಿಸಿದರು. ಪ್ರವರ್ಗ 2ಡಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದರೆ ಆಗಬಹುದು ಎಂದು ಕೆಲ ನಾಯಕರು ಅಭಿಪ್ರಾಯ
ಮಂಡಿಸಿದರು.

ಹರಜಾತ್ರೆಯಲ್ಲಿ ಮೀಸಲಾತಿ ವಿಚಾರವಾಗಿಯೇ ಬೃಹತ್‌ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ADVERTISEMENT

‘ಮೀಸಲಾತಿ’ ಕುರಿತು ವಿಚಾರ ಮಂಡಿಸಿದ ವಕೀಲ ಬಿ.ಎಸ್‌. ಪಾಟೀಲ್‌, ‘2ಡಿಗೆ ಶೇ 15ರಷ್ಟು ಮೀಸಲಾತಿ ನೀಡಿದರೆ ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದರು.

‘ರಾಜಕೀಯ ಮೀಸಲಾತಿ ಇರುವ 2ಎ ಕೇಳುವ ಬದಲು ಸಮಾಜದ ಬಡ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕವಾಗಿ ಮೀಸಲಾತಿ ಸಿಗಬೇಕು. ಅದಕ್ಕಾಗಿ 2ಡಿ, 3ಬಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕೇಳೋಣ’ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಲಹೆ ನೀಡಿದರು.

‘ವಾಲ್ಮೀಕಿ ಶ್ರೀಗಳ ಮಾತೇ ನನ್ನದೂ ಆಗಿದೆ’ ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಹಮತ ವ್ಯಕ್ತಪಡಿಸಿದರು.

‘ನಾವು 2ಡಿ ಮೀಸಲಾತಿಯನ್ನು ಸ್ವಾಗತಿಸುವುದೂ ಇಲ್ಲ, ವಿರೋಧಿ ಸುವುದೂ ಇಲ್ಲ. ಅದರ ಸಾಧಕ–ಬಾಧಕಗಳನ್ನು ಚರ್ಚಿಸುತ್ತೇವೆ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು’ ಎಂದು ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.

ಮಧ್ಯಾಹ್ನದ ನಂತರ ನಡೆದ ‘ರೈತರತ್ನ’ ಸಮಾವೇಶದಲ್ಲಿ ಭಾಗವ ಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪಂಚಮಸಾಲಿ ಸಮುದಾಯವು ಎಲ್ಲರಿಗೂ ಅನ್ನ ನೀಡುವ ಕೃಷಿಕ ಸಮಾಜ. ನಿಮಗೆ ಸಾಮಾಜಿಕ ನ್ಯಾಯ ಸಿಗಲೇಬೇಕು. ನಿಮ್ಮ ಪಾಲನ್ನು ಕೊಡಲೇಬೇಕು. ಈಗ 2ಡಿ ಮೀಸಲಾತಿ ನೀಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇವೆ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನಿಮಗೆ ನ್ಯಾಯ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.

‘ನನ್ನ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ನೀಡುವುದಿಲ್ಲ. ಯಾವುದು ಸರಿ, ಯಾವುದು ತಪ್ಪು ಎನ್ನುವುದು ಕೆಲವೇ ಸಮಯದಲ್ಲಿ ಅವರಿಗೆ ಮನವರಿಕೆಯಾಗಲಿದೆ. ಪಂಚಮಸಾಲಿ ಸಮುದಾಯದ ಇಬ್ಬರು ಸ್ವಾಮೀಜಿಗಳೂ ನನಗೆ ಒಂದೇ. ಈ ಸಮುದಾಯದ ಸಂಕಷ್ಟಗಳ ಬಗ್ಗೆ ಇಬ್ಬರೂ ನನಗೆ ಮನವರಿಕೆ ಮಾಡಿದ್ದಾರೆ. ಅದಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

*
ವಿಜಯಪುರ, ಹುನಗುಂದದ ನಾಟಕ ಕಂಪನಿಗಳು ಹಾಗೂ ಕೂಡಲಸಂಗಮದ ಶ್ರೀಗಳ ದೊಂಬರಾಟವು ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವುದಕ್ಕೆ ಅಡ್ಡಿ ಯಾಗಿದೆ.
-ಮುರುಗೇಶ ಆರ್‌. ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.