ADVERTISEMENT

ಯಾವುದೇ ಡೆಡ್‌ಲೈನ್‌ ನಡೆಯೊಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 20:10 IST
Last Updated 9 ಜನವರಿ 2019, 20:10 IST
   

ಬೆಂಗಳೂರು:‘ಮೈತ್ರಿ ಸರ್ಕಾರ ಭದ್ರವಾಗಿದ್ದು, ಸಂಕ್ರಾಂತಿ ಡೆಡ್‌ಲೈನ್‌ ಮಾತ್ರವಲ್ಲ, ಬಿಜೆಪಿಯ ಯಾವುದೇ ಡೆಡ್‌ಲೈನ್‌ಗಳು ನಡೆಯುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಂಕ್ರಾಂತಿಗೆ ಒಂದು ಡೆಡ್‌ಲೈನ್‌ ಇದೆ. ಶಿವರಾತ್ರಿಗೂ ಒಂದು ಡೆಡ್‌ಲೈನ್‌ ಬರುತ್ತೆ. ಅದಾದ ಬಳಿಕ ಯುಗಾದಿಗೂ ಒಂದು ಡೆಡ್‌ಲೈನ್‌ ಬರುತ್ತದೆ. ಆದರೆ, ಅದ್ಯಾವುದೂ ನಡೆಯುವುದಿಲ್ಲ. ಅವೆಲ್ಲ ಸುಳ್ಳು’ ಎಂದರು.

‘ನಿಗಮ– ಮಂಡಳಿ ನೇಮಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೆಲವು ಸಮಸ್ಯೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿತ್ತು. ಎಲ್ಲವೂ ಸುಗಮವಾಗಿ ಬಗೆಹರಿಲಿದೆ. ಯಾರಿಗೂ ಅಗೌರವ ಮಾಡಬೇಕು ಎಂಬ ಕಾರಣಕ್ಕೆ ಪಟ್ಟಿ ತಡೆ ಹಿಡಿದಿಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದರು.

ADVERTISEMENT

ಕರಾವಳಿ ಭಾಗದ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಲಾಗಿದೆ. ಕಾಣೆಯಾದ ಕುಟುಂಬದವರು ಗಾಬರಿಯಾಗಬೇಕಿಲ್ಲ. ಪರಿಸ್ಥಿತಿ ನಿಭಾಯಿಸಲು ಮೀನುಗಾರಿಕಾ ಸಚಿವರನ್ನು ಕರಾವಳಿಗೆ ಕಳುಹಿಸಲಾಗಿದೆ. ಕಾಣೆಯಾದ ಮೀನುಗಾರಿಕೆ ಕುಟುಂಬಕ್ಕೆ ತಾತ್ಕಲಿಕವಾಗಿ ತಲಾ ₹ 1 ಲಕ್ಷ ಪರಿಹಾರ ನೀಡಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.