ADVERTISEMENT

ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 19:22 IST
Last Updated 21 ಜೂನ್ 2022, 19:22 IST
   

ಬೆಂಗಳೂರು: ದೃಷ್ಟಿ ದೋಷ, ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೆಳಗಾವಿ ಜಿಲ್ಲೆಯ ಕೇಳಿಗ್ರಾಮದ ಶಂಕ್ರಮ್ಮ ಎಂಬುವರ ಪುಟ್ಟ ಮಗಳು ಕೃಷ್ಣವೇಣಿಯ ಸಂಪೂರ್ಣ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ ಮಾಡಿದ್ದಾರೆ.

ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಹಿಂದಿರುಗಿದಾಗ ಹಸುಗೂಸು ಎತ್ತಿಕೊಂಡ ಶಂಕ್ರಮ್ಮ ಗಮನ ಸೆಳೆದರು. ಆಕೆಯ ಬಳಿ ಸಮಸ್ಯೆಯನ್ನು ವಿಚಾರಿಸಿದಾಗ, ಮಗುವಿನ ಕಾಯಿಲೆ ಬಗ್ಗೆ ವಿವರಿಸಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ನೆರವು ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಬೊಮ್ಮಾಯಿ, ಕೃಷ್ಣವೇಣಿಯ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದು ಮಾತ್ರವಲ್ಲದೆ, ಎರಡು ತಾಸಿನ ಒಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಪತ್ರ ಬರೆದು, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು.

ADVERTISEMENT

ಮಗುವಿನ ಚಿಕಿತ್ಸೆ ಸಂಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಬಿಲ್‌ಗಳನ್ನು ಸಲ್ಲಿಸುವಂತೆಯೂ ಪತ್ರದಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಯವರು ತ್ವರಿತಗತಿ ಸ್ಪಂದಿಸಿದ ಬಗ್ಗೆ ಮಗುವಿನ ತಾಯಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.