ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನ ಸೋಮವಾರ ಬೆಳಿಗ್ಗೆ ಆರಂಭವಾಗುವುದಕ್ಕೂ ಮೊದಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯರಪ್ಪ ಸಂಪುಟ ಸಹೋದ್ಯೋಗಿಗಳ ಜೊತೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ‘ಸದನದಲ್ಲಿ ಎಲ್ಲರೂ ಒಟ್ಟಾಗಿ ಇರಲು ಮತ್ತು ಜನರ ಸಮಸ್ಯೆಗಳನ್ನು ಆಲಿಸುವ ಕುರಿತು ಸಚಿವರ ಜೊತೆ ಚರ್ಚಿಸಲು ಸಭೆ ಕರೆದಿದ್ದೇನೆ’ ಎಂದರು.
‘ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸುವಂತೆ ಕೋರಿ ಕೋರ್ಟ್ ಮೊರೆ ಹೋಗಿರುವ ಆರು ಸಚಿವರಿಗೆ ಸದನದಲ್ಲಿ ಉತ್ತರಿಸಲು ನೈತಿಕತೆ ಇಲ್ಲ’ ಎಂದು, ಆ ಸಚಿವರ ಉತ್ತರವನ್ನು ವಿರೋಧ ಪಕ್ಷ ಕಾಂಗ್ರೆಸ್ ಶಾಸಕರು ಬಹಿಷ್ಕರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ, ಈ ಸಂದರ್ಭದಲ್ಲಿ ಎಲ್ಲ ಸಚಿವರು ಒಟ್ಟಾಗಿದ್ದು, ಕಾಂಗ್ರೆಸ್ ನಾಯಕರ ವಾಗ್ದಾಳಿ ಎದುರಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಏನು ಬೇಕಾದರೂ ಪ್ರಸ್ತಾಪ ಮಾಡಲಿ: ‘ಅಧಿವೇಶನದಲ್ಲಿ ಅವರು (ಕಾಂಗ್ರೆಸ್ನವರು) ಕಾನೂನು ಸುವ್ಯವಸ್ಥೆ, ಸಿ.ಡಿ ವಿಚಾರ ಹೀಗೆ ಏನು ಬೇಕಾದರೂ ಪ್ರಸ್ತಾಪ ಮಾಡಲಿ. ಸರ್ಕಾರದ ಗಮನ ಸೆಳೆಯಲಿ. ಸಚಿವರು ಎಚ್ಚರಿಕೆಯಿಂದ ಕೆಲಸ ಮಾಡಲು ಸಹಕಾರಿ ಆಗುತ್ತದೆ. ಒಳ್ಳೆಯ ಸಲಹೆ ಕೊಟ್ಟರೆ ಖಂಡಿತವಾಗಿ ಸ್ವೀಕರಿಸುತ್ತೇವೆ’ ಎಂದು ಯಡಿಯೂರಪ್ಪ
ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ,‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವುದೇ ವಿಷಯ ಪ್ರಸ್ತಾಪಿಸಲು ಸರ್ವಸ್ವತಂತ್ರರು’ ಎಂದರು.
ಸಮರ್ಥನೆಗೂ ಮುಂದಾಗಬೇಕು
ಸರ್ಕಾರದ ಮೇಲೆ ಯಾವುದೇ ವಿಷಯದ ಬಗ್ಗೆ ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸಿದಾಗ ಸಮರ್ಥನೆಗೆ ಸಚಿವರು ಮುಂದಾಗಬೇಕು. ಯಾರೋ ಒಬ್ಬರು ಅಥವಾ ಇಬ್ಬರು ಸಮರ್ಥನೆಗೆ ನಿಂತು ಉಳಿದವರು ಮೌನವಾಗಿ ಕೂರುವುದು ಸರಿಯಲ್ಲ ಎಂದೂ ಯಡಿಯೂರಪ್ಪ ಸಭೆಯಲ್ಲಿ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.