ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಬರ (ಮುಸ್ಲಿಂ) ಹೆಂಡತಿಯರಬಗ್ಗೆ ಇರುವ ಚಿಂತೆ ರಾಮನ ಬಗ್ಗೆ ಏಕಿಲ್ಲ. ಅವರಿಗೆ ಅಯೋಧ್ಯಾ ವಿವಾದ ಪರಿಹಾರವಾಗುವುದೇ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಟೀಕಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ವಿವಾದ ಬಗೆಹರಿಸಬೇಕೆಂಬ ಇಚ್ಚಾಶಕ್ತಿ ಬಿಜೆಪಿಗಿಲ್ಲ. ಈ ವಿವಾದ ಮುಂದಿಟ್ಟುಕೊಂಡು ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದರು.
ಅಯೋಧ್ಯೆಯಲ್ಲಿರಾಮ ಮಂದಿರ ಕಟ್ಟಲು ನಮ್ಮ ಅಭ್ಯಂತರ ಇಲ್ಲ. ಮುಸ್ಲಿಂ ಸಮುದಾಯವು ಕೂಡ ಇದನ್ನೇ ಹೇಳುತ್ತಿದೆ. ಆದರೆ ಮೋದಿ ವಿವಾದ ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ. ಈ ವಿವಾದ ಜೀವಂತವಾಗಿ ಇಟ್ಟು ಮತ ಕೇಳುವ ಉದ್ದೇಶವಿದೆ ಎಂದರು.
ಮೋದಿಗೆ ತನ್ನ ಹೆಂಡತಿ ಬಗ್ಗೆ ಗೊತ್ತಿಲ್ಲ, ನಮ್ಮ ಹೆಂಡತಿ ಬಗ್ಗೆ ಮಾತನಾಡುತ್ತಾರೆ. ಹೆಂಡತಿಗೆ ಅವರು ಜೀವನಾಂಶ ಕೊಡುತ್ತಾರಾ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಘಟನೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಮತಗಳನ್ನ ಕೇಳುತ್ತಿದ್ದರು. ಈಗಅಯೋಧ್ಯಾ ವಿಷಯ ಮುಂದೆ ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಗೋ ಸಂರಕ್ಷಣೆ ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ, ಉತ್ತರ ಪ್ರದೇಶದಲ್ಲಿ ಗೋ ಪೂಜೆ ಮಾಡುತ್ತಿದೆ. ಆದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಪ್ತು ಹೆಚ್ಚಾಗಿದೆ. ಬಿಜೆಪಿ ನಾಯಕರು ಗೋವುಗಳನ್ನುಕತ್ತರಿಸುವವರು ಎಂದರು.
ಇವುಗಳನ್ನೆಲ್ಲ ನೋಡಿಕೊಂಡು ಜನ ಸುಮ್ಮನೆ ಕುಳಿತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾಗಿ ಉತ್ತರ ಕೊಡುತ್ತಾರೆ. ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲುವು ಪಡೆಯುತ್ತವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.