ಬೆಂಗಳೂರು: ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಸೂಚಿಸಿದ್ದಾರೆ.
ನಿಯಮಿತ ಸ್ವರೂಪದ ವರ್ಗಾವಣೆ ಕೋರಿಕೆಯ ಕಡತಗಳನ್ನು ತಮ್ಮ ಕಚೇರಿಗೆ ಕಳುಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಗಳವಾರ ಟಿಪ್ಪಣಿ ಹೊರಡಿಸಿರುವ ಮುಖ್ಯಮಂತ್ರಿ, ಇಂತಹ ಬೆಳವಣಿಗೆ ನಿಲ್ಲದಿದ್ದರೆ ಇಲಾಖೆಗಳಲ್ಲಿ ಕೆಲಸ ಕುಂಠಿತವಾಗಲಿದೆ ಎಂದು ಹೇಳಿದ್ದಾರೆ.
ಬಿ, ಸಿ ಮತ್ತು ಡಿ ವೃಂದಗಳಲ್ಲಿ ಖಾಲಿ ಇರುವ/ ರಿಕ್ತ ಹುದ್ದೆಗಳಿಗೆ ಇಲಾಖಾ ಸಚಿವರ ಹಂತದಲ್ಲೇ ವರ್ಗಾವಣೆ ಆದೇಶ ಹೊರಡಿಸಬೇಕು. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಆದೇಶ ಹೊರಡಿಸಬಾರದು. ಎ ವೃಂದದಲ್ಲಿನ ಖಾಲಿ ಹುದ್ದೆಗಳಲ್ಲಿ ಸ್ಥಳ ನಿಯುಕ್ತಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಮಾತ್ರ ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.