ADVERTISEMENT

ಕುಮಾರಸ್ವಾಮಿ ಮಗನಿಗೂ ಸಿಗುತ್ತಾ ಗುಪ್ತಚರ ಮಾಹಿತಿ?: ಸುರೇಶ್ ಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 9:44 IST
Last Updated 21 ನವೆಂಬರ್ 2018, 9:44 IST
   

ಬೆಂಗಳೂರು:ರೈತರ ಪ್ರತಿಭಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್‌ ಕುಮಾರ್‌ ಅವರು, ‘ನಮಗೆ ಬಂದ ಇಂಟಲಿಜೆನ್ಸ್ ರಿಪೋರ್ಟ್‌ ಪ್ರಕಾರ’ ಎಂದಿದ್ದನ್ನು ಉಲ್ಲೇಖಿಸಿರುವ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಎಸ್‌., ‘ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ನಿಖಿಲ್‌ ಕುಮಾರ್‌ ಅವರು, ನಮಗೆ ದೊರೆತಿರುವ(ಗುಪ್ತಚರ) ಮಾಹಿತಿ ಪ್ರಕಾರ ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವರು ರೈತರೇ ಅಲ್ಲ ಎಂಬರ್ಥದ ಮಾತುಗಳನ್ನಾಡಿರುವ ವಿಡಿಯೊವೊಂದನ್ನು ಸುರೇಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ವಿಡಿಯೋ ಮೇಲೆ, ‘ಸಿಎಂ ಪುತ್ರನಿಗೆ ವರದಿ ನೀಡುತ್ತಿದೆ ಗುಪ್ತಚರ ಇಲಾಖೆ? ವರದಿ ಪಡೆಯಲು ನಿಖಿಲ್‌ ಕುಮಾರ್‌ ಮುಖ್ಯಮಂತ್ರಿಯೇ? ಗೃಹಮಂತ್ರಿಯೇ? ಅಪ್ಪ ಮಕ್ಕಳ ರಾಜಕಾರಣದಲ್ಲಿ ಕಾನೂನು ಕಾಲಕಸ’ ಎಂದು ಬರೆಯಲಾಗಿದೆ.

ADVERTISEMENT

ವಿಡಿಯೊದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ನಿಖಿಲ್‌, ‘ನೆನ್ನೆ(ಪ್ರತಿಭಟನೆಗೆ) ಬಂದಂತಹ ವ್ಯಕ್ತಿಗಳು ಏನಿದ್ದಾರೆ ಅಲ್ಲಿ, ನಾವೂ ಸರ್ಕಾರ ನಡೆಸುತ್ತಿದ್ದೇವೆ. ನಮಗೆ ಬಂದಿರುವ ಇಂಟಲಿಜೆನ್ಸ್‌ ರಿಪೋರ್ಟ್‌ ಪ್ರಕಾರ... ನಾವೂ ಸರ್ಕಾರ ನಡೆಸುತ್ತಿದ್ದೇವೆ. ನೋಡಿ ರೈತರುಗಳುಗೂಂಡಾವರ್ತನೆ ಮಾಡ್ತರಾ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕರು, ‘ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ ‘ಅಧಿಕಾರ’ ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.