ಹರಿಹರ (ದಾವಣಗೆರೆ ಜಿಲ್ಲೆ): ಇಲ್ಲಿ ಬುಧವಾರ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಫೋಟೊ ತೋರಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹರಿಹರ ಕ್ಷೇತ್ರದ ಮೂವರು ಆಕಾಂಕ್ಷಿಗಳಿಂದ ‘ಒಗ್ಗಟ್ಟು ಪ್ರದರ್ಶಿಸುತ್ತೇವೆ’ ಎಂದು ಪ್ರಮಾಣ ಮಾಡಿಸಿದರು.
ಬಿಜೆಪಿಯ ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ಮುಖಂಡ ಚಂದ್ರಶೇಖರ ಪೂಜಾರ್ ಬೆಂಬಲಿಗರು ಶಕ್ತಿ ಪ್ರದರ್ಶಿಸಲು ಪೈಪೋಟಿಗೆ ಇಳಿದಿದ್ದರಿಂದ ಮುಖ್ಯಮಂತ್ರಿ ವೇದಿಕೆಗೆ ಬರುತ್ತಿದ್ದಂತೆ ಮುಜುಗರಕ್ಕೆ ಒಳಗಾದರು.
ತಕ್ಷಣವೇ ಬಿ.ಪಿ. ಹರೀಶ್ ಹಾಗೂ ಚಂದ್ರಶೇಖರ ಪೂಜಾರ್ ಜೊತೆಗೆ ಇನ್ನೊಬ್ಬ ಆಕಾಂಕ್ಷಿಯಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಅವರನ್ನೂ ತಮ್ಮ ಬಳಿ ಕರೆಸಿಕೊಂಡರು. ‘ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷವನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಮೂವರು ನಾಯಕರಿಗೂ ಕಾರ್ಯಕರ್ತರ ಎದುರಿಗೇ ಪ್ರಮಾಣ ಮಾಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.