ಮುಖ್ಯಮಂತ್ರಿ ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ (ಬೆಳಗಾವಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳಲ್ಲಿ ಬಳಸಿದ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನಗಳ ಹಾರಾಟಕ್ಕೆ ₹47.15 ಕೋಟಿ ವೆಚ್ಚ ಮಾಡಲಾಗಿದೆ.
ಒಟ್ಟು 180 ಬಾರಿ ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅದರಲ್ಲಿ 25 ಬಾರಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ.
ವಿಧಾನಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಒದಗಿಸಿರುವ ಮಾಹಿತಿಯಲ್ಲಿ ಈ ವಿವರಗಳಿವೆ.
ಕರ್ನಾಟಕ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದರು. ದೆಹಲಿ ಭೇಟಿ ಹಾಗೂ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸಲು ಹಲವು ಬಾರಿ ವಿಮಾನ ಹಾಗೂ ಹೆಲಿಕಾಪ್ಟರ್ ಬಳಕೆ ಮಾಡಿದ್ದಾರೆ. 2023ನೇ ಆಗಸ್ಟ್ 18ರಿಂದ ಆರಂಭವಾದ ಅವರ ವಾಯು ಹಾರಾಟ ಇದುವರೆಗೂ ಮುಂದುವರಿದಿದೆ. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ಬಳಸಿದ ಜಿಎಂಪಿ ಕಂಪನಿಯ ವಿಶೇಷ ವಿಮಾನಕ್ಕೆ ಒಂದೇ ದಿನದ ವೆಚ್ಚ ₹1 ಕೋಟಿಗೂ ಅಧಿಕ.
ಕೆಲವೊಮ್ಮೆ ಮೂರು ದಿನಗಳ ಪ್ರಯಾಣ ಮಾಡಿದ್ದು, ಬೆಂಗಳೂರು–ಮುಂಬೈ, ಬೆಂಗಳೂರು–ದೆಹಲಿ, ದೆಹಲಿ–ಮುಂಬೈ ಪ್ರಯಾಣ ಮಾಡಿದ್ದು ಒಟ್ಟು ₹79 ಲಕ್ಷ ವೆಚ್ಚ ಮಾಡಲಾಗಿದೆ. ಬೆಂಗಳೂರು ಸಮೀಪ ಇರುವ ಗೌರಿಬಿದನೂರಿಗೆ ಎಚ್ಎಎಲ್ ಏರ್ಪೋರ್ಟ್ನಿಂದ ಜಿಎಂಪಿ ಕಂಪನಿಯ ಹೆಲಿಕಾಪ್ಟರ್ನಲ್ಲಿ ಹೋಗಿದ್ದಕ್ಕೆ ₹7,78,800 ಖರ್ಚು ಮಾಡಲಾಗಿದೆ.
ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸಲು ಅವಕಾಶವಿದೆ ಎಂದು ಮಾಹಿತಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.