ಬೆಂಗಳೂರು: ಸಹಕಾರ ಸಂಸ್ಥೆಗಳ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲು ಸಹಕಾರ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
2003ರಲ್ಲಿ ಯಶಸ್ವಿನಿ ಯೋಜನೆಯನ್ನು ಆರಂಭಿಸಲಾಗಿತ್ತು. 14 ವಿಭಾಗಗಳಲ್ಲಿ 823 ವಿಧದ ಶಸ್ತ್ರಚಿಕಿತ್ಸೆ
ಗಳಿಗೆ ನಗದುರಹಿತ ಸೌಲಭ್ಯ ಇತ್ತು. 2018ರಲ್ಲಿ ಈ ಯೋಜನೆಯನ್ನು ಸಹಕಾರ ಇಲಾಖೆಯಿಂದ ಆರೋಗ್ಯ ಇಲಾಖೆಗೆ ವಹಿಸಲಾಗಿತ್ತು. ಆರೋಗ್ಯ ಇಲಾಖೆಯು 2018ರ ಮೇ 31ರಂದು ಯಶಸ್ವಿನಿ ಯೋಜನೆಯನ್ನು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಳಿ
ಸಿತ್ತು. ಆ ಬಳಿಕ ಸಹಕಾರ ಸಂಘಗಳ ಸದಸ್ಯರಿಗೆ ಪ್ರತ್ಯೇಕ ಆರೋಗ್ಯ ವಿಮೆ ಸ್ಥಗಿತವಾಗಿತ್ತು.
ಯಶಸ್ವಿನಿ ಯೋಜನೆಯನ್ನು ಪುನಃ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ವರ್ಷದ ಬಜೆಟ್ನಲ್ಲಿ ಪ್ರಕಟಿಸಿದ್ದರು. ಅದರಂತೆ ಯೋಜನೆಯ ಜಾರಿಗೆ ಆದೇಶ ಹರಡಿಸಿದ್ದು, ‘ಯಶಸ್ವಿನಿ ಟ್ರಸ್ಟ್’ ಪುನರ್ರಚನೆ, ಆಡಳಿತ ನಿಯಂತ್ರಣ, ಸದಸ್ಯತ್ವ ನೋಂದಣಿ, ಚಿಕಿತ್ಸೆಗಳ ಪಟ್ಟಿ ಹಾಗೂ ದರ ಪಟ್ಟಿ ಸಿದ್ಧಪಡಿಸುವುದು, ಸೇವಾ ಸಮಾಲೋಚಕರ ನೇಮಕ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಹಕಾರ ಸಂಘಗಳ ರಿಜಿಸ್ಟ್ರಾರ್ಗೆ ನಿರ್ದೇಶನ ನೀಡಲಾಗಿದೆ.
‘ರೈತರ ಆರೋಗ್ಯದ ದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಮತ್ತೆ ಆರಂಭಿಸಿದೆ. ಈ ಯೋಜನೆಗೆ
₹ 300 ಕೋಟಿ ಮೀಸಲಿಡಲಾಗಿದೆ. ಯೋಜನೆಯಲ್ಲಿ ಕೆಲವು ಬದಲಾವಣೆ ತರಲು ಉದ್ದೇಶಿಸಲಾಗಿದೆ. ಎರಡರಿಂದ ಮೂರು ವಾರಗಳಲ್ಲಿ ಯಶಸ್ವಿನಿ ಯೋಜನೆ ಜಾರಿ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.