ಮೈಸೂರು: ‘ಸಚಿವ ಮುರುಗೇಶ ನಿರಾಣಿ ಮಠಕ್ಕೆ ದಾನವಾಗಿ ನೀಡಿರುವ ವಸ್ತುಗಳೆಲ್ಲವನ್ನೂ ಅವರ ಮನೆಗೆ ಮರಳಿಸುವ ವಿಚಾರಕ್ಕೆ ಈಗಲೂ ಬದ್ಧವಾಗಿದ್ದೇನೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಮಾತುಕತೆಗೆ ನಾನು ಅವರನ್ನು ಕರೆಯುವುದಿಲ್ಲ. ಬೇಕಾದರೆ ಅವರೇ ಬಂದು ಮಾತನಾಡಲಿ. ಗುರುಗಳ ಭೇಟಿಗೆ ಎಲ್ಲರಿಗೂ ಅವಕಾಶವಿದೆ. ನನ್ನ ಮಠ 24X7 ತೆರೆದಿರುತ್ತದೆ. ನಾವಿಬ್ಬರು ಗುರು–ಶಿಷ್ಯರು. ಅವರು ಗುರುವನ್ನು ಭೇಟಿಯಾಗಲಿ’ ಎಂದು ಸ್ಪಷ್ಟಪಡಿಸಿದರು.
ದೇಶಕ್ಕೆ ಒಬ್ಬರೇ ರಾಷ್ಟ್ರಪತಿ: ’ದೇಶಕ್ಕೆ ಒಬ್ಬರೇ ರಾಷ್ಟ್ರಪತಿ, ಒಂದು ಸಮುದಾಯಕ್ಕೆ ಒಬ್ಬರೇ ಗುರು. ಪಂಚಮಸಾಲಿ ಸಮಾಜಕ್ಕೆ ಮೂರನೇ ಪೀಠದ ಅಗತ್ಯವಿಲ್ಲ’ ಎಂಬುದನ್ನು ಅವರು ಪುನರುಚ್ಚರಿಸಿದರು.
‘14 ವರ್ಷಗಳಿಂದ ಕಷ್ಟಪಟ್ಟು ಸಮುದಾಯವನ್ನು ಒಗ್ಗೂಡಿಸಿದ್ದೇನೆ. ಕೂಡಲಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುತ್ತಿದೆ ಎಂಬ ಹೊಟ್ಟೆಕಿಚ್ಚಿನಿಂದ ಕೆಲವರು ಈ ಹುನ್ನಾರ ನಡೆಸಿದ್ದಾರೆ. ಪಂಚಮಸಾಲಿ ಪೀಠವೇ ನಮ್ಮ ಪೀಠ. ಅವರು ಬೇಕಾದರೆ ಮನೆಗೊಂದು, ಊರಿಗೊಂದು ಪೀಠ ಮಾಡಿಕೊಳ್ಳಲಿ. ಪಂಚಮಸಾಲಿಗೆ
2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ. ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸದ್ಯದಲ್ಲೇ ಜಯ ಸಿಗಲಿದೆ’ ಎಂದು ಸ್ವಾಮೀಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.