ADVERTISEMENT

ಲಂಚ ಪಡೆದಾದರೂ ಕೆಲಸ ಕೊಡಿ ಎನ್ನುವ ಉದ್ಯೋಗಾಕಾಂಕ್ಷಿಗಳ ಗೋಳು ಕೇಳಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2022, 7:29 IST
Last Updated 20 ಸೆಪ್ಟೆಂಬರ್ 2022, 7:29 IST
   

ಬೆಂಗಳೂರು: ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.ಪ್ರತಿಭಟನಾನಿರತ ಉದ್ಯೋಗಾಕಾಂಕ್ಷಿಗಳು 'ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ' ಎಂದು ಪತ್ರ ಬರೆದು, ಘೋಷಣೆಗಳನ್ನು ಕೂಗುವ ಮೂಲಕ ಕೆಲಸಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, #40PercentSarkara ಟ್ಯಾಗ್‌ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪಿಎಸ್‌ಐ ನೇಮಕಾತಿ ಹಗರಣದಿಂದಾಗಿ ಸಾಕಷ್ಟು ಜನರ ಬದುಕು ಅತಂತ್ರವಾಗಿದೆ ಎಂದಿರುವ ಕಾಂಗ್ರೆಸ್‌, 'ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ.ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ. 40 ಪರ್ಸೆಂಟ್ ಕಮಿಷನ್‌ ಸರ್ಕಾರನಡೆಸಿದ ಪಿಎಸ್‌ಐ ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ. ಬದುಕು ಛಿದ್ರವಾಗಿದೆ.ಇವರ ಅತಂತ್ರಬದುಕಿಗೆ ಪರಿಹಾರವೇನು ಬಸವರಾಜ ಬೊಮ್ಮಾಯಿಯವರೇ?' ಎಂದು ಕೇಳಿದೆ.

'40 ಪರ್ಸೆಂಟ್ ಸರ್ಕಾರದಲ್ಲಿಲಂಚವೇ ಸತ್ಯ,ಲಂಚಕ್ಕೇ ಪ್ರಾಶಸ್ತ್ಯ,ಲಂಚವೇ ದೇವರು,ಲಂಚವೇ ಸರ್ವಸ್ವ,ಲಂಚವೇ ಸರ್ವವ್ಯಾಪಿ,ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯುತ್ತಾ ಇದ್ದಾರೆ.ಲಂಚ ಪಡೆದಾದರೂ ಕೆಲಸ ಕೊಡಿ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇಕೇಳಿಸಿಕೊಳ್ಳಿ' ಎಂದು ಕಿಡಿಕಾರಿದೆ.

'ಈ ಯುವಕರು ತಮ್ಮ ಕುಟುಂಬಸ್ಥರಿಗೆ ನೌಕರಿ ಪಡೆಯುವ ಭರವಸೆ ಕೊಟ್ಟು ಓದಿದ್ದಾರೆ. ಪೋಷಕರು ತಮ್ಮ ಮಗ ಉದ್ಯೋಗಸ್ಥನಾಗಿ ಮನೆಗೆ ಬೆಳಕಾಗುತ್ತಾನೆ ಎಂದು ಆಸೆ ಕಂಗಳಲ್ಲಿ ನೋಡುತ್ತಿದ್ದಾರೆ.ಭ್ರಷ್ಟ 40 ಪರ್ಸೆಂಟ್ ಸರ್ಕಾರದಿಂದ ಈ ಯುವಕರು ಮನೆಯಲ್ಲಿ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ. ಬೊಮ್ಮಾಯಿ ಅವರೇ, ತಾವು ಇವರ ಗೋಳು ಕೇಳುವುದು ಯಾವಾಗ?' ಎಂದು ಪ್ರಶ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.